ಹೊಸದಿಗಂತ ವರದಿ,ಶಂಕರಘಟ್ಟ:
ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕುವೆಂಪು ವಿವಿಯ ದೂರಶಿಕ್ಷಣದ ಸ್ನಾತಕ ಪದವಿಗಳ ಪ್ರಥಮ ಮತ್ತು ದ್ವಿತೀಯ ವರ್ಷ ಹಾಗೂ ಸ್ನಾತಕೋತ್ತರ ಪದವಿಗಳ ಪ್ರಥಮ ವರ್ಷದ ಪರೀಕ್ಷಾ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ. ಈ ವಿದ್ಯಾರ್ಥಿಗಳಿಗೆ ಏಪ್ರಿಲ್ ತಿಂಗಳಿನಲ್ಲಿ ಪರೀಕ್ಷೆ ನಡೆಸುವುದಾಗಿ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್ ಪ್ರಕಟಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ 2019-20ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಆವೃತ್ತಿಗೆ ಪ್ರವೇಶ ಪಡೆದ ದೂರಶಿಕ್ಷಣದ ಸ್ನಾತಕ ಪದವಿಗಳ ಪ್ರಥಮ ಮತ್ತು ದ್ವಿತೀಯ ವರ್ಷ ಹಾಗೂ ಸ್ನಾತಕೋತ್ತರ ಪದವಿಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸದೇ ಮುಂದಿನ ಸೆಮಿಸ್ಟರ್ಗಳಿಗೆ ಮುಂಬಡ್ತಿ ನೀಡಲು ನಿರ್ಧರಿಸಿ ಫೆಬ್ರವರಿ 09 ರಂದು ಆದೇಶ ಹೊರಡಿಸಲಾಗಿತ್ತು.
ಮಾರ್ಚ್ ತಿಂಗಳಿನಲ್ಲಿ ನಡೆದ ಸಿಂಡಿಕೇಟ್ ಸಾಮಾನ್ಯ ಸಭೆ ಮತ್ತು ವಿದ್ಯಾ ವಿಷಯಕ ಪರಿಷತ್ ಸಭೆಗಳ ನಿರ್ಣಯದಂತೆ ಈ ಕ್ರಮವನ್ನು ರದ್ದುಗೊಳಿಸಲಾಗಿದೆ. ಏಪ್ರಿಲ್ ಮಾಹೆಯ ಮೂರನೆ ವಾರದಲ್ಲಿ ನಿಯಮಾನುಸಾರ ಗುರುತಿಸಲಾಗುವ ಕಲಿಕಾ ಕೇಂದ್ರಗಳ ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸಂಬಂಧಿಸಿದ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲು ಈ ಮೂಲಕ ತಿಳಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಸದ್ಯದಲ್ಲೆ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟ ಮಾಡಿದ್ದನ್ನು ವಿವಿ ಕುಲಪತಿ ಪ್ರೊ.ವೀರಭದ್ರಪ್ಪ ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದರು.