ಮಾಜಿ ಪ್ರಧಾನಿ ದೇವೇಗೌಡರ ಕುರಿತಾಗಿ ರಾಜಣ್ಣ ಹೇಳಿಕೆಗೆ ಬಸವರಾಜ ಹೊರಟ್ಟಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ದೇಶದ ಮಾಜಿ ಪ್ರಧಾನಿ, ಹಿರಿಯ ರಾಜಕಾರಣಿ ಹೆಚ್.ಡಿ.ದೇವೇಗೌಡರ ವಯಸ್ಸು ಹಾಗೂ ಶಕ್ತಿಯ ಕುರಿತು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಅಪಹಾಸ್ಯದ ಮಾತುಗಳು ಸಲ್ಲ, ಕೂಡಲೇ ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೆಚ್.ಡಿ.ದೇವೇಗೌಡರು ಪ್ರಧಾನಿ ಹುದ್ದೆಗೆ ಏರಿದ ಏಕೈಕ ಕನ್ನಡಿಗರಾಗಿದ್ದಾರೆ. ಸುದೀರ್ಘ ಕಾಲದ ಅವರ ರಾಜಕೀಯ ಅನುಭವವನ್ನು ನಾಡು ಪಕ್ಷಾತೀತವಾಗಿ ಗೌರವಿಸಬೇಕು. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಹಿರಿಯರ ಕುರಿತು ಹೇಳಿಕೆ ನೀಡುವಾಗ ವೈಯಕ್ತಿಕ ಅಪಹಾಸ್ಯ, ಅಪನಿಂದೆಗಳಿಗೆ ಅವಕಾಶ ಕಲ್ಪಿಸಬಾರದು. ರಾಜಕಾರಣಿಗಳ ನಡೆಗಳು ನೈತಿಕತೆಯ ಎಲ್ಲೆ ಮೀರಬಾರದು. ಪ್ರತಿಯೊಂದು ಮಾತು, ಹೇಳಿಕೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ ಎಂಬುದರ ಅರಿವು ಸದಾ ಕಾಲ ಜಾಗೃತವಾಗಿರಬೇಕು. ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ಹೆಚ್.ಡಿ.ದೇವೇಗೌಡರನ್ನು ಖುದ್ದಾಗಿ ಭೇಟಿಯಾಗಿ ಬಹಿರಂಗ ಕ್ಷಮೆಯಾಚಿಸಬೇಕು ಇಂತಹ ತಪ್ಪುಗಳಿಗೆ ಪ್ರಾಯಶ್ಚಿತ್ತ ಅನುಭವಿಸಬೇಕು ಎಂದು ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

error: Content is protected !!