ಹೊಸ ದಿಗಂತ ವರದಿ, ಬಳ್ಳಾರಿ:
ಮೊದಲ ಬಾರಿಗೆ ಜಿಲ್ಲಾಡಳಿತ ಬಳ್ಳಾರಿ ಉತ್ಸವವನ್ನು ಆಯೋಜಿಸಿದ್ದು, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಗುರುವಾರ ಸಂಜೆ ನಗರದ ಮೋತಿ ವೃತ್ತದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡಿದರು.
ಉತ್ಸವ ಹಿನ್ನೆಲೆ ಇಡೀ ನಗರ ಬಣ್ಣ ಬಣ್ಣದ ವಿದ್ಯುತ್ ದೀಪಲಂಕಾರದಿಂದ ಕಂಗೊಳಿಸುತ್ತಿದೆ. ನಗರದ ರಾಯಲ್ ವೃತ್ತ, ಮೋತಿ ವೃತ್ತ, ರಾಘವ ಕಲಾಮಂದಿರ ವೃತ್ತ, ಬೆಂಗಳೂರು ರಸ್ತೆ ಸೇರಿದಂತೆ ನಗರದ ನಾನಾ ರಸ್ತೆಗಳು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ, ನಗರದ ಮೋತಿ ವೃತ್ತದ ಬಳಿ ಅಳವಡಿಸಿದ ಕಮಲದ ಆಕಾರದ ವಿದ್ಯುತ್ ದೀಪ ನೋಡುಗರ ಗಮನಸೆಳೆಯುತ್ತಿದೆ.
ಉತ್ಸವ ನಿಮಿತ್ತ ಮುನ್ಸಿಪಲ್ ಮೈದಾನದಲ್ಲಿ ಮುಖ್ಯ ವೇದಿಕೆ ಹಾಗೂ ಶ್ರೀ ಕೋಟೆ ಮಲ್ಲೇಶ್ವರ ದೇಗುಲದ ಬಳಿ ನಿರ್ಮಿಸಲಾದ ವೇದಿಕೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಉತ್ಸವ ನಿಮಿತ್ತ ಎರಡೂ ವೇದಿಕೆಗಳಲ್ಲಿ ಸಿದ್ದತೆ ಬಹುತೇಕ ಪೂರ್ಣಗೊಂಡಿದೆ. ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಮೊದಲ ಬಾರಿಗೆ ಬಳ್ಳಾರಿ ಉತ್ಸವವನ್ನು ಆಯೋಜಿಸಲಾಗಿದ್ದು, ಸಿದ್ದತೆ ಬಹುತೇಕ ಪೂರ್ಣಗೊಂಡಿದೆ. ಇಡೀ ಬಳ್ಳಾರಿ ನಗರ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ, ಬೈಸ್ಕೈ, ಎತ್ತಿನ ಬಂಡೆಗಳ ಮೆರವಣಿಗೆ, ಗಾಳಿಪಟ ಉತ್ಸವ, ಆಹಾರ ಮೇಳ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಬಳ್ಳಾರಿ ಉತ್ಸವದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಮ್ಮೆಲ್ಸಿ ವೈ.ಎಂ.ಸತೀಶ್, ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಪಾಟೆ, ಪಾಲಿಕೆ ಮೇಯರ್ ರಾಜೇಶ್ವರಿ ಸುಬ್ಬರಾಯಡು, ಪಾಲಿಕೆ ಆಯುಕ್ತ ರುದ್ರೇಶ್, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಎಡಿಸಿ ಮಂಜುನಾಥ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರಶೇಖರ ರೆಡ್ಡಿ, ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ ಸೇರಿದಂತೆ ಇತರರಿದ್ದರು.