ಹೊಸ ದಿಗಂತ ವರದಿ, ಬಳ್ಳಾರಿ:
ಗಣಿನಗರಿ ಬಳ್ಳಾರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ, ವಿಮಾನ ನಿಲ್ದಾಣಕ್ಕೆ 40 ಕೋಟಿ ರೂ., ಸಿದ್ದ ಉಡುಪು ಘಟಕಗಳ ಸ್ಥಾಪನೆಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದು ಸಂತಸ ಮೂಡಿಸಿದೆ ಎಂದು ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿನಾಡು ಬಳ್ಳಾರಿ ಜಿಲ್ಲೆಯ ಜನರ ಕನಸನ್ನು ನನಸಾಗಿಸಲು ಮಹತ್ವದ ತೀರ್ಮಾನ ಕೈಗೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವ ಬಿ.ಶ್ರಿರಾಮುಲು ಸೇರಿದಂತೆ ಸಂಪುಟದ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುವೆ, ಬಳ್ಳಾರಿಯ ಯುವ ಕ್ರಿಕೇಟ್ ಆಟಗಾರರ ಬಹುದಿನಗಳ ಬೇಡಿಕೆಯಂತೆ ನಗರದ ನಲ್ಲ ಚೆರವು ಪ್ರದೇಶದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ, ಜಿಲ್ಲೆಯ ಜನರ ಸುಮಾರು ವರ್ಷಗಳ ಬೇಡಿಕೆಯಾಗಿದ್ದ ನೂತನ ವಿಮಾನ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ 40ಕೋಟಿ ರೂ.ಅನುದಾನ ಒದಗಿಸುವುದು ಸೇರಿ ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುವ ತೀರ್ಮಾನ ಕೈಗೊಂಡಿದೆ, ಬೈನರಿ ಅಪೆರೆಲ್ ಪಾರ್ಕ್ ದವರು ಬಳ್ಳಾರಿ ಜಿಲ್ಲೆಯ ಮುಂಡರಗಿ ಕೈಗಾರಿಕಾ ಪ್ರದೇಶದಲ್ಲಿ ಸಿದ್ದ ಉಡುಪು ಘಟಕಗಳನ್ನು ಸ್ಥಾಪಿಸಿ ಸುಮಾರು 100 ಕೋಟಿ ಬಂಡವಾಳ ಹೂಡಿಕೆ ಮಾಡಿ, ಅಂದಾಜು 5 ಸಾವಿರ ಜನರಿಗೆ ಉದ್ಯೋಗ ಅವಕಾಶ ದೊರಕಿಸಿ ಕೊಡಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಸಂತಸ ಮೂಡಿಸಿದೆ, ವಿಶೇಷವಾಗಿ ಸಿ.ಎಂ.ಬಸವರಾಜ್ ಬೊಮ್ಮಾಯಿ, ಸಾರಿಗೆ ಸಚಿವ ಬಿ.ಶ್ರಿರಾಮುಲು ಅವರು ಅಭಿನಂದನೆಗಳನ್ನು ಸಲ್ಲಿಸುವೆ ಎಂದು ತಿಳಿಸಿದರು.