ಹೊಸದಿಗಂತ ವರದಿ,ಹುಬ್ಬಳ್ಳಿ:
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಅಧಿವೇಶನದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಾಗೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದರು.
ಶುಕ್ರವಾರ ತಾಲೂಕಿ ಹೆಬಸೂರ ಗ್ರಾಮದಲ್ಲಿ ಮಾತನಾಡಿದ ಅವರು, ಶೇ. ೪೦ ರಷ್ಟು ಕಮಿಷನ್ ಆರೋಪಕ್ಕೆ ದಾಖಲೆ ಕೊಡಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕಮಿಷನ್ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅವರು ತಮ್ಮ ಆತ್ಮ ಸಾಕ್ಷಿಗೆ ಉತ್ತರ ಕೊಟ್ಟುಕೊಳ್ಳಬೇಕು ಎಂದರು.
ವಿಧಾನ ಸಭೆ ಕಲಾಪದಲ್ಲಿ ಭ್ರಷ್ಟಾಚಾರ ಬಗ್ಗೆ ಚರ್ಚೆ ಮಾಡುವುದು ಉಪಯೋಗವಿಲ್ಲ. ೨೦೦೮ ರಿಂದ ಟೆಂಡರ್ ಪಡೆಯುವುದರಲ್ಲಿ ಅನೇಕ ಅವ್ಯವಹಾರವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದ್ದಾಗ ಸ್ಪರ್ಧೆಗಿಳಿದು ಅವ್ಯವಹಾರ ಮಾಡಿದ್ದಾರೆ. ಈ ಕುರಿತು ದಾಖಲೆ ನೀಡಲಾಗದು. ಹಿಂದೆ ದಾಖಲೆ ಸಮೇತ ಭ್ರಷ್ಟಾಚಾರದ ಬಗ್ಗೆ ಮಾತನಾಡಿದಾಗ ಅದರ ಪ್ರಯೋಜ ಕಾಂಗ್ರೆಸ್ ಪಡೆಯಿತು ಎಂದು ತಿಳಿಸಿದರು.
ಪಂಚರತ್ನ ಯಾತ್ರೆಯ ಮೂಲಕ ಜನಸಾಮಾನ್ಯರ ಬದುಕು ಸರಿಪಡಿಸಲು ಅವಕಾಶ ನೀಡಿ ಎಂದು ಹೊರಟ್ಟಿದ್ದೇವೆ. ಕೆಪಿಸಿಸಿ ಅಧ್ಯಕ್ಷರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವದು ವಿಚಿತ್ರ ಸಂಗತಿ ಎಂದು ಹೇಳಿದರು.