ಹೊಸದಿಗಂತ ವರದಿ, ಕಲಬುರಗಿ
ಕಳೆದ ಮೇ. 3ರಂದು ನಡೆದಿದ್ದ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ತಡೆಯಲು ನಿಗಾ ವಹಿಸಬೇಕಿದ್ದ ಪರೀಕ್ಷಾ ಕೇಂದ್ರದ ಉಸ್ತುವಾರಿಯಾಗಿ ಕರ್ತವ್ಯ ನಿಭಾಯಿಸುವಲ್ಲಿ ಲೋಪ ಎಸಗಿದ ಆರೋಪದ ಮೇರೆಗೆ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ರೊಬ್ಬರನ್ನು ಅಮಾನತುಗೊಳಿಸಲಾಗಿದೆ.
ನಗರದ ಜ್ಷಾನಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ತಿದ್ದುಪಡಿ ಮತ್ತು ಡಿವೈಸ್ ಬಳಸುವುದನ್ನು ತಡೆಗಟ್ಟಲು ವಿಫಲವಾದ ಹಿನ್ನೆಲೆಯಲ್ಲಿ ಬೆರಳಚ್ಚು ವಿಭಾಗದ ಡಿವೈಎಸ್ಪಿ ಹೊಸಮನಿ ಹಾಗೂ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ದಿಲೀಪ್ ಸಾಗರ ಅಮಾನತುಗೊಂಡಿದ್ದಾರೆ.
ಜ್ಞಾನ ಜ್ಯೋತಿ ಪರೀಕ್ಷೆ ಕೇಂದ್ರಕ್ಕೆ ಈ ಇಬ್ಬರು ಅಧಿಕಾರಿಗಳನ್ನು ಕರ್ತವ್ಯ ನಿರ್ವಹಣೆಗೆ ನಿಯೋಜಿಸಲಾಗಿತ್ತು. ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಅಕ್ರಮವೇ ನಡೆಯುತ್ತಿರಲಿಲ್ಲ ಎಂಬುದನ್ನು ಮನಗಂಡು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಡಿವೈಎ ವಿಚಾರಣೆ: ನಾಲ್ಕು ದಿನಗಳ ಹಿಂದೆ ನಿವೃತ್ತಿ ಯಾದ ಡಿವೈಎಸ್ಪಿ ಅವರ ಎರಡು ಮೊಬೈಲ್ ಸಿಮ್ ಜಪ್ತಿ ಮಾಡಿರುವ ಸಿಐಡಿ ಪೊಲೀಸ್ ರು ಬುಧವಾರ ಸಂಜೆ ರಾಯಚೂರು ಜಿಲ್ಲೆಯ ಸೇವೆಯಲ್ಲಿರುವ ಡಿವೈಎಸ್ಪಿ ಯೊಬ್ಬರನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಪಿಎಸ್ಐ ನೇಮಕಾತಿಯ ಪರೀಕ್ಷೆ ಅಕ್ರಮದಲ್ಲಿ ಈಗ ಹಿರಿಯ ಪೊಲಿಸ್ ಅಧಿಕಾರಿಗಳದ್ದೇ ಒಬ್ಬೊಬ್ಬರ ಹೆಸರು ಬಯಲಿಗೆ ಬರುತ್ತಿದೆ. ವಿಚಾರಣೆ ಮತ್ತಷ್ಟು ಆಳಗೊಂಡರೆ ಮತ್ತಷ್ಟು ಕುಳಗಳು ಬಯಲಿಗೆ ಬರುವುದು ನಿಶ್ಚಿತ.