ಹೊಸ ದಿಗಂತ ವರದಿ, ಮಡಿಕೇರಿ:
ನಗರದ ಆಹಾರ ವಿತರಣಾ ಸಂಸ್ಥೆಯೊಂದರ ಉದ್ಯೋಗಿಯೊಬ್ಬರು ಬೈಕ್ ಅವಘಡಕ್ಕೀಡಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಮೂಲತಃ ಮೈಸೂರಿನ ಹಿನಕಲ್ ನಿವಾಸಿಯಾಗಿದ್ದು, ಪ್ರಸಕ್ತ ಕುಶಾಲನಗರದಲ್ಲಿ ನೆಲೆಸಿದ್ದ ಎ.ಸಿ.ತೇಜಸ್ ತಿಮ್ಮಯ್ಯ(28) ಎಂಬವರೇ ದುರ್ಮರಣಕ್ಕೀಡಾದವರು.
ನಗರದ ಚೈನ್’ಗೇಟ್ ಬಳಿ ಆಹಾರ ವಿತರಣೆಗೆಂದು ತೆರಳಿದ್ದ ಸಂದರ್ಭ ಅವರು ಚಾಲಿಸುತ್ತಿದ್ದ ಬೈಕ್’ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಪರಾರಿಯಾಗಿದ್ದಾಗಿ ಹೇಳಲಾಗಿದ್ದು, ಈ ಸಂದರ್ಭ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.
ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.