ಗುತ್ತಿಗೆದಾರ ಸಚಿನ್ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ: ಸಿಬಿಐ ತನಿಖೆಗೆ ಕುಟುಂಬಸ್ಥರ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬೀದರ್ ಮೂಲದ ಕಾಂಟ್ರಾಕ್ಟರ್ ಸಚಿನ್ ಪಂಚಾಳ್ ನಿವಾಸಕ್ಕೆ ರಾಜ್ಯ ಬಿಜೆಪಿ ನಿಯೋಗ ಭೇಟಿ ನೀಡಿದ್ದು, ಮೃತನ ಕುಟುಂಬಸ್ಥರು ನಿಯೋಗದ ಮುಂದೆ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದಲ್ಲಿರುವ ಮೃತ ಗುತ್ತಿಗೆದಾರ ಸಚಿನ್ ನಿವಾಸಕ್ಕೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಪ ಸದಸ್ಯ ಎನ್.ರವಿಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡ ವಿಚಾರವಾಗಿ ಕುಟುಂಬಸ್ಥರಿಂದ ಬಿಜೆಪಿ ನಿಯೋಗ ಮಾಹಿತಿ ಪಡೆಯಿತು. ಈ ವೇಳೆ ಕುಟುಂಬಸ್ಥರೊಂದಿಗೆ ಪೊಲೀಸರು ವರ್ತಿಸಿದ ರೀತಿ ಆಘಾತಕಾರಿಯಾಗಿದೆ. ಆ ಕುಟುಂಬಸ್ಥರ ಮಾತಲ್ಲೇ ಕೇಳಿ,’ಸಾರ್, ಪೊಲೀಸರಿಗೆ ದೂರು ನೀಡಿದ್ರು ಯಾರೂ ತೆಗೆದುಕೊಳ್ಳಲಿಲ್ಲಾ, ರೈಲ್ವೆ ಹಳಿ ಮೇಲೆ ಕುಳಿತು ಆರೋಪಿಗಳನ್ನ ಬಂಧಿಸುವಂತೆ ಮನವಿ ಮಾಡಿದ್ರೂ ಪೊಲೀಸರು ನಮ್ಮ ಸ್ಪಂದನೆ ನೀಡಲಿಲ್ಲ. ಪೊಲೀಸ್ ಠಾಣೆಗೆ ಹೋಗಿದ್ದಕ್ಕೆ, ‘ಪೊಲೀಸ್ ಠಾಣೆಗೆ ನೀವು ಯಾಕೆ ಬಂದ್ರಿ? ಅವನ(ಆರೋಪಿ) ಫೋನ್ ಸ್ವಿಚ್ ಆಫ್ ಆಗಿದೆ, ನಾನು ಏನು ಮಾಡಲಿ? ಸತ್ತರೆ ಹೇಗೆ ಡೆತ್ ನೋಟ್ ಜಾಲತಾಣದಲ್ಲಿ ಅಪ್ಲೋಡ್ ಮಾಡ್ತಾನೆ ಎಂದು ಗಾಂಧಿಗಂಜ್ ಪಿಎಸ್‌ಐ ಉಡಾಫೆಯಾಗಿ ಮಾತಾಡಿದ್ರು. ಈ ಪೊಲೀಸರು ಎಷ್ಟು ಕ್ರೂರಿಗಳಿದ್ದಾರೆ ಸಾರ ಎಂದು ಬಿಜೆಪಿ ನಿಯೋಗದ ಮುಂದೆ ಅಳಲು ತೋರಿಕೊಂಡರು.

ಪೊಲೀಸರು ಸ್ವಲ್ಪ ಹೆಲ್ಪ್ ಮಾಡಿದ್ರೆ ನಮ್ಮ ಅಣ್ಣನ ಜೀವ ಉಳಿತಿತ್ತು. ಪೊಲೀಸರು ತುಂಬಾ ಕ್ರೂರಿಗಳು. ನಮಗೆ ಪೊಲೀಸರಿಂದ ನ್ಯಾಯ ಸಿಗುತ್ತೆ ಎಂದು ಭಾವಿಸಿದ್ದೆವು. ಆದರೆ ಪೊಲೀಸರು ಆರೋಪಿಗಳ ಪರವಾಗಿ, ಅನ್ಯಾಯದ, ಕೊಲೆಗಡುಕರ ಪರವಾಗಿ ನಿಂತಿದ್ದಾರೆ. ನಮ್ಮ ಅಣ್ಣನ ಬಾಡಿ ಮೇಲೆ ಎರಡು ಮೂರು ಟ್ರೈನ್ ಓಡಾಡಿವೆ ಸರ್.. ಕಣ್ಣೀರಾದರು.
ನಮಗೆ ಈ ಪೊಲೀಸರ ಮೇಲೆ ನಂಬಿಕೆ, ಭರವಸೆ ಇಲ್ಲ. ಈ ಪೊಲೀಸರು ತನಿಖೆ ಮಾಡುವುದರಿಂದ ನಮ್ಮಣ್ಣನ ಸಾವಿಗೆ ನ್ಯಾಯ ಸಿಗುತ್ತೆ ಅನ್ನುವ ಯಾವ ಭರವಸೆ ಇಲ್ಲ. ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಬಿಜೆಪಿ ನಿಯೋಗದ ಮುಂದೆ ಕುಟುಂಬಸ್ಥರು ಒತ್ತಾಯಿಸಿದರು.

ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿ ಹೋರಾಟ
ಸಚಿವ ಪ್ರಿಯಾಂಕ್ ಖರ್ಗೆ ಅವರ ದುಷ್ಟ ಕೂಟದ ಸದಸ್ಯರ ಕಿರುಕುಳ, ಬೆದರಿಕೆಗಳನ್ನು ಸಹಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ಸಚಿನ್ ಸಾವಿನಿಂದ ದಿಗ್ಮೂಢ ಸ್ಥಿತಿಯಲ್ಲಿರುವ ಕುಟುಂಬದ ಸ್ಥಿತಿ ಮಾನವೀಯತೆ ಇರುವ ಎಂಥವರ ಅಂತಃಕರಣವನ್ನೂ ಕಲಕುತ್ತದೆ. ಅನಾಥ ಪ್ರಜ್ಞೆ ಎದುರಿಸುತ್ತಿರುವ ಮೃತರ ಆಶ್ರಯಿಸಿದ್ದ ಕುಟುಂಬ ಸದಸ್ಯರ ಹಾಗೂ ಬಂಧುಗಳ ಆಕ್ರಂದನದ ಶಾಪ ಕಾಂಗ್ರೆಸ್ ಸರ್ಕಾರವನ್ನು ತಟ್ಟದೇ ಬಿಡದು, ದುಷ್ಕರ್ಮಿಗಳ ಗುಂಪನ್ನು ಪೋಷಿಸುತ್ತಿರುವ ಪ್ರಿಯಾಂಕ್ ಖರ್ಗೆ ಇದರ ಫಲ ಅನುಭವಿಸಲೇಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ವಿಜಯೇಂದ್ರ, ಹೇಳೋದು ಸಿದ್ದಾಂತ ಮಾಡೋದು ದುರಾಚಾರ ಊರಿಗೆಲ್ಲ ಉಪದೇಶ, ಸಿದ್ಧಾಂತ ಹೇಳುತ್ತಾ ತಾವು ಮಾತ್ರ ನೊಂದವರ ಧ್ವನಿಯಾಗಬಲ್ಲೆವು ಎಂಬ ರೀತಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರ ನೈಜ ಮುಖವಾಡ ಈ ಘಟನೆಯಿಂದ ಕಳಚಿ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷದಲ್ಲಿದಾಗ ಇಂಥದ್ದೇ ಪ್ರಕರಣಗಳಲ್ಲಿ ಅಧಿಕಾರದಲ್ಲಿದ್ದವರ ರಾಜೀನಾಮೆಗೆ ಆರ್ಭಟಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮದೇ ಸರ್ಕಾರದ ಅವಧಿಯಲ್ಲಿ ನಡೆದಿರುವ ಘಟನೆಯ ಹಿನ್ನಲೆಯಲ್ಲಿ ಈ ಕೂಡಲೇ ದುಷ್ಟರು, ಪುಂಡರು, ಕಮಿಷನ್ ವಸೂಲಿಗಾರರನ್ನು ಜೊತೆಗಿಟ್ಟುಕೊಂಡು ಒಬ್ಬ ಅಮಾಯಕ ಗುತ್ತಿಗೆದಾರನ ಆತ್ಮಹತ್ಯೆಗೆ ಕಾರಣರಾಗಿರುವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆದುಕೊಂಡು ತನಿಖೆಯು ಪಾರದರ್ಶಕವಾಗಿ ನಡೆಯಲು ಅವಕಾಶ ಮಾಡಿಕೊಡಲಿ ಎಂದು ಒತ್ತಾಯಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!