ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಆಗಮನದ ವಿಚಾರದ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಮನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮೋದಿಯವರನ್ನಾದರೂ ಕರೆಸಲಿ, ಅಮೆರಿಕ ಅಧ್ಯಕ್ಷರನ್ನಾದರೂ ಕರೆಸಲಿ, ನನಗೆ ಆತಂಕ ಇಲ್ಲ. ಆದರೆ ಅವರು ಒಂದು ದಿನ ಭಾಷಣ ಮಾಡಿ ಹೋಗಬಹುದಲ್ವಾ? ಮಂಡ್ಯ, ತುಮಕೂರು, ಮೈಸೂರಿನಿಂದ ಜನರನ್ನು ಕರೆಸಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವ ಅಮಿತ್ ಶಾ ರೋಡ್ ಶೋ ಕೂಡ ಗಮನಿಸಿದ್ದೇನೆ. 4 ತಿಂಗಳಿನಿಂದ ನಡೆಸಿದ ರೋಡ್ ಶೋ ಮುಂದೆ ಇದೇನೂ ಅಲ್ಲ. ನನ್ನ ಕಾರ್ಯುಕ್ರಮದ ವಿಶೇಷತೆಗಳೇ ಬೇರೆಯಾಗಿತ್ತು. ನನ್ನ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕ್ರಮ ಸರಿಸಾಟಿ ಅಲ್ಲ ಎಂದು ಹೆಚ್ಡಿಕೆ ಟಾಂಗ್ ನೀಡಿದರು.
ಇದೇ ವೇಳೆ ನನ್ನ ಆರೋಗ್ಯದ ಕುರಿತು ದೇವೇಗೌಡರಿಗೆ ಸ್ವಲ್ಪ ಆತಂಕವಿದೆ. ವೈದ್ಯರು ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆದರೆ ನಾನು ವಿಶ್ರಾಂತಿ ಪಡೆಯುವ ವೇಳೆ ಇದಲ್ಲ. ಕೆ.ಆರ್ ನಗರ, ಚಾಮರಾಜನಗರ, ವರುಣಾದಲ್ಲಿ ಪ್ರಚಾರ ಸಭೆ ಕರೆದಿದ್ದೇನೆ ಎಂದು ತಿಳಿಸಿದರು.