ಹೊಸದಿಗಂತ ಡಿಜಿಟಲ್ ಡೆಸ್ಕ್
ಚಳಿಗಾಲದ ಅಧಿವೇಶನದ ಉದ್ಘಾಟನಾ ದಿನವಾದ ಸೋಮವಾರ ವಿಧಾನಸಭೆಯೊಳಗೆ ರಾಷ್ಟ್ರಗೀತೆ ನುಡಿಸುವಾಗ ಕುಳಿತುಕೊಂಡಿದ್ದ ಕಾಂಗ್ರೆಸ್ ಶಾಸಕನ ವಿರುದ್ಧ ಬಿಹಾರದ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಾರಿಯಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಅವಿದುರ್ ರೆಹಮಾನ್ ಕಾಲಿಗೆ ನೋವಾಗಿದೆ ಎಂಬ ನ ನೆಪವೊಡ್ಡಿ ಎದ್ದು ನಿಲ್ಲಲಿಲ್ಲ. ಆದಾಗ್ಯೂ, ಕಲಾಪವನ್ನು ಆ ದಿನ ಮುಂದೂಡುವ ಮೊದಲು, ಮೃತಪಟ್ಟವರ ಸಂತಾಪ ಸೂಚನೆಗಾಗಿ ಎರಡು ನಿಮಿಷಗಳ ಮೌನವನ್ನು ಆಚರಿಸಿದಾಗ 55 ವರ್ಷದ ಶಾಸಕ ಇತರ ಸದಸ್ಯರೊಂದಿಗೆ ಎದ್ದು ನಿಂತಿರುವುದು ಕಂಡುಬಂದಿತು.
“ರಾಷ್ಟ್ರಗೀತೆಯ ಗೌರವಾರ್ಥವಾಗಿ ಎರಡು ನಿಮಿಷ ಎದ್ದುನಿಲ್ಲಲಾರದಷ್ಟು ಅವರನ್ನು ಕಾಲು ನೋವು ತಡೆಯುತ್ತಿದ್ದರೆ, ನಂತರ ನೋವು ಇದ್ದಕ್ಕಿದ್ದಂತೆ ಹೇಗೆ ಮಾಯವಾಯಿತು? ಸದನ ಮುಕ್ತಾಯದ ವೇಳೆ ರಾಷ್ಟ್ರಗೀತೆಗೆ ನಿಲ್ಲಬೇಕಾಗಿದ್ದಕ್ಕಿಂತ ಹೆಚ್ಚು ಸಮಯ ಅವರು ನಿಂತಿದ್ದರು. ಇದು ಉದ್ದೇಶಪೂರ್ವಕವಾಗಿ ಮಾಡಿದಂತೆ ತೋರುತ್ತದೆ. ರಾಷ್ಟ್ರಗೀತೆಗೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ನೀರಜ್ ಸಿಂಗ್ ಬಬ್ಲು ಕಿಡಿಕಾರಿದ್ದಾರೆ.
ಈ ಅಭಿಪ್ರಾಯಗಳನ್ನು ಬಿಜೆಪಿಯ ಸಹ ಶಾಸಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ಅವರು ಪ್ರತಿಧ್ವನಿಸಿದ್ದಾರೆ. ಮತ್ತು ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರು “ರಾಷ್ಟ್ರಗೀತೆಗೆ ಅವಮಾನ”ವಾದ ವಿಚಾರವನ್ನು ಅರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮಾಜಿ ಸಚಿವರೂ ಆಗಿರುವ ಮತ್ತೊಬ್ಬ ಬಿಜೆಪಿ ಶಾಸಕ ಪ್ರಮೋದ್ ಕುಮಾರ್, ತಪ್ಪಿತಸ್ಥ ಶಾಸಕನ ಮೇಲೆ ದೇಶದ್ರೋಹದ ಆರೋಪ ಹೊರಿಸುವಂತೆ ಆಗ್ರಹಿಸಿದ್ದಾರೆ.
ಬಿಹಾರದ ವಿಧಾನಸಭೆಯಲ್ಲಿ ಈ ರೀತಿಯ ವಿವಾದ ಇದೇ ಮೊದಲಲ್ಲ. ಜುಲೈನಲ್ಲಿ ಆರ್ಜೆಡಿ ಶಾಸಕ ಸೌದ್ ಆಲಂ ವಿಧಾನಸಭೆಯಲ್ಲಿ ವಂದೇ ಮಾತರಂ ಮೊಳಗುವಾಗ ಎದ್ದು ನಿಲ್ಲಲು ನಿರಾಕರಿಸಿ ‘ಭಾರತ ಹಿಂದೂ ರಾಷ್ಟ್ರವಲ್ಲ’ ಎಂದು ಹೇಳಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ