ಹೊಸದಿಗಂತ ವರದಿ, ಹಾವೇರಿ:
ಕಾಂಗ್ರೆಸ್ ನಾಯಕರು ಮೋದಿಯವರನ್ನು ಹೀಯಾಳಿಸಿದಷ್ಟು ಬಿಜೆಪಿಯ ಕಮಲ ಅರಳುತ್ತಾ ಸಾಗುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿಯವರನ್ನು ವಿಷ ಸರ್ಪ ಅಂದಿದ್ದಾರೆ. ಈ ಮೊದಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರೀಯಾಂಕ ಗಾಂಧಿ ವಾದ್ರ ಮೋದಿಯವರನ್ನು ನಿಂದಿಸಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಮತಯಾಚನಾ ಸಮಾವೇಶದಲ್ಲಿ ಮಾತನಾಡಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮೌಥ್ ಕಾ ಸೌದಾ ಗರ್, ಪ್ರೀಯಾಂಕ ಗಾಂಧಿ ವಾದ್ರ ನೀಚ ಜಾತಿಯವರು ಅಂದಿದ್ದರು. ಕಾಂಗ್ರೆಸ್ ನವರು ಮೋದಿಯವರನ್ನು ತೆಗಳಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಶಾ ಕಾಂಗ್ರೆಸ್ ನಾಯಕರ ವಿರುದ್ಧ ವಗ್ದಾಳಿ ನಡೆಸಿದರು.
ರಾಜ್ಯ ಕಾಂಗ್ರೆಸ್ನ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದ್ಕಕೆ ಹೊಡೆದಾಡುತ್ತಿದ್ದಾರೆ. ಆದರೆ ಯಾಕೆ ಹೊಡೆದಾಡುತ್ತಿದ್ದೀರಿ?. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಸಿಎಂ ಆಗುವ ಕನಸು ಬಿಟ್ಟು ಬಿಡಿ. ಬಿಜೆಪಿಯವರು ಸಿಎಂ ಆಗೋರಿದ್ದಾರೆ ಎಂದು ಅಮಿತ್ ಶಾ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ಕಾಂಗ್ರೆಸ್ ಪಕ್ಷ ಪಿಎಫ್ಐ ಬ್ಯಾನ್ ಮಾಡಲಿಲ್ಲ. ಆದ್ರೆ ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿತು. ಪಿಎಫ್ಐ ಬ್ಯಾನ ಮಾಡಿ ಅನೇಕ ಅಪರಾಧಿಗಳನ್ನು ಜೈಲಿಗೆ ಹಾಕಿದೆ. ಡಿಜಿಹಳ್ಳಿ ಕೆಜಿಹಳ್ಳಿ ಗಲಭೆ, ಮಂಗಳೂರು ಗಲಭೆ ಪ್ರಕರಣವನ್ನು ಎನ್ಐಎಗೆ ಒಪ್ಪಿಸಿದೆ. ಈ ಎಲ್ಲ ಅಪರಾಧ ಪ್ರಕರಣಗಳಲ್ಲಿ ಉಳಿದ ಸಣ್ಣ ಸಣ್ಣ ಅಪರಾಧಿಗಳನ್ನು ಬಿಡದೇ ಹುಡುಕಿ ಜೈಲಿಗೆ ಅಟ್ಟುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷ ಸುಳ್ಳು ಹೇಳುವ ಗ್ಯಾರಂಟಿ ಇದೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮಾಡುವ ಗ್ಯಾರಂಟಿ ಇದೆ. ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಶೇ.೪ರಷ್ಟು ಮೀಸಲಾತಿ ಕೊಟ್ಟಿತ್ತು. ಆದರೆ ಅಂಬೇಡ್ಕರ್ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೆ, ದಲಿತರು, ಮುಸ್ಲಿಂ ಸಮಾಜದಲ್ಲಿ ಅತಿ ಹಿಂದುಳಿದ ಜನರಿಗೆ, ಸಮಾಜದಲ್ಲಿ ಅತಿ ಹಿಂದುಳಿದವರಿಗೆ ಮೀಸಲಾತಿ ಕೊಡಬೆಕಿತ್ತು. ಆದರೆ ಕಾಂಗ್ರೆಸ್ದವರು ಮುಸ್ಲಿಂ ಸಮಾಜಕ್ಕೆನೇ ಶೇ.೪ರ್ಟು ಮೀಸಲಾತಿಯನ್ನು ನೀಡಿದ್ದರು. ಈ ಮೀಸಲಾತಿಯನ್ನು ತಗೆದು ಲಿಂಗಾಯತ, ಒಕ್ಕಲಿಗರಿಗೆ ಹಂಚಿಕೆ ಮಾಡಿದ್ದು ನಿಮ್ಮ ಬಿಜೆಪಿ ಸರ್ಕಾರ ಎಂದು ತಿಳಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕದ ಅಭಿವೃದ್ಧಿಗೆ ಎಷ್ಟು ಅನುದಾನ ನೀಡಿದ್ದೀರಿ ಎಂದು ಒಂದು ತಿಂಗಳಿಂದ ಕೇಳುತ್ತಿದ್ದರೂ ಕಾಂಗ್ರೆಸ್ನವರ ಬಳಿ ಉತ್ತರವಿಲ್ಲ. ನೀವು ನೀಡಿದ ಅನುದಾನದ ಮಾಹಿತಿಯುಳ್ಳ ಪುಸ್ತಕ ತಗೊಂಡು ಬನ್ನಿ ಬಿಜೆಪಿ ಯುವ ಮೋರ್ಜಾ ಅದ್ಯಕ್ಷರನ್ನು ಕಳಿಸುತ್ತೇನೆ ಬಹಿರಂಗವಾಗಿ ಚರ್ಚೆ ಆಗಲಿ ಎಂದು ಸವಾಲೆಸೆದರು.
ಸಂಸದರಾದ ಶಿವಕುಮಾರ ಉದಾಸಿ, ಪರವೇಶ ವರ್ಮಾ, ಅಭ್ಯರ್ಥಿಗಳಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಗವಿಸಿದ್ದಪ್ಪ ದ್ಯಾವಣ್ಣಣವರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಡಾ. ಬಸವರಾಜ ಕೇಲಗಾರ ಹಾಗೂ ಇತರರಿದ್ದರು.