ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎಲೆಕ್ಷನ್ ಎಫೆಕ್ಟ್ ಬ್ಲಡ್ ಬ್ಯಾಂಕ್ಗಳಿಗೂ ತಟ್ಟಿದ್ದು, ಸಾಕಷ್ಟು ರೋಗಿಗಳಿಗೆ ಸಮಯಕ್ಕೆ ಸರಿಯಾಗ ರಕ್ತ ಸಿಗದೇ ಪರದಾಡುವಂತಾಗಿದೆ.
ರಕ್ತಕ್ಕಾಗಿ ಬ್ಲಡ್ ಬ್ಯಾಂಕ್ಗಳಿಗೆ ಅಲೆದಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ರಕ್ತದಾನ ಶಿಬಿರಗಳು ನಡೆದಿದ್ದು ಅತಿ ವಿರಳ. ರಾಜಕೀಯ ನಾಯಕರು ಈಗ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಜನ್ಮದಿನ, ಆನಿವರ್ಸರಿ, ವಿಶೇಷ ವ್ಯಕ್ತಿಗಳ ಹೆಸರಿನಲ್ಲಿ ಸಾಕಷ್ಟು ರಕ್ತದಾನ ನಡೆಯುತ್ತಿತ್ತು. ಆದರೆ ನೀತಿ ಸಂಹಿತೆ ಕಾರಣದಿಂದಾಗಿ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಸಂಘ ಸಂಸ್ಥೆಗಳು, ಸಿನಿ ತಾರೆಯರು ಯಾರೂ ರಕ್ತದಾನ ಶಿಬಿರ ಮಾಡುತ್ತಿಲ್ಲ.
ಬೆಂಗಳೂರಿನ ರಾಷ್ಟ್ರೋತ್ಥಾನ ಸಂಸ್ಥೆಯ ನಿಧಿಯಲ್ಲಿ ತಿಂಗಳಿ ಎರಡು ಸಆವಿರಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಣೆಯಾಗುತ್ತಿತ್ತು. ಆದರೆ ಈ ಸಂಖ್ಯೆ ಇದೀಗ ಅರ್ಧದಷ್ಟಾಗಿದೆ. ತಿಂಗಳಿಗೆ 30-40 ಶಿಬಿರಗಳನ್ನು ಮಾಡಲಾಗುತ್ತಿತ್ತು. ಆದರೆ ಈ ಬಾರಿ 15 ಶಿಬಿರ ಕೂಡ ಏರ್ಪಡಿಸಲಾಗಿಲ್ಲ.
ರಾಜಧಾನಿಯಲ್ಲಿ ನಿತ್ಯ 2,500 ಯುನಿಟ್ ರಕ್ತಕ್ಕೆ ಬೇಡಿಕೆ ಇದೆ, ಆದರೆ ಈಗ ಸಂಗ್ರಹವಾಗುತ್ತಿರುವುದು 300-400 ಯುನಿಟ್ ಮಾತ್ರ. ಈ ಎಲ್ಲ ಕಾರಣಗಳಿಂದ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಜನರೇ ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಬೇಕಿದೆ.