ಹೊಸ ದಿಗಂತ ವರದಿ, ಮಡಿಕೇರಿ:
ಮತದಾರರು ನೀಡಿದ ತೀರ್ಪಿಗೆ ತಲೆಬಾಗುವುದಾಗಿ ಮಡಿಕೇರಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಪ್ಪಚ್ಚು ರಂಜನ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್, ನನ್ನ ಜೊತೆ ಚುನಾವಣೆ ಸಂದರ್ಭ ಕಾರ್ಯನಿರ್ವಹಿಸಿದ ಕಾರ್ಯಕರ್ತರು, ಪಕ್ಷದ ಮುಖಂಡರಿಗೆ ಹಾಗೂ ಮತದಾರರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಕಳೆದ 25 ವರ್ಷಗಳಿಂದ ಜನರು ಸಮಾಜ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಅದರಂತೆ ಅಭಿವೃದ್ದಿ ಹಾಗೂ ಜನಪರ ಕಾರ್ಯಗಳನ್ನು ಕ್ಷೇತ್ರದಲ್ಲಿ ಯಾರಿಗೂ ತೊಂದರೆಯಾಗದಂತೆ ಮಾಡಿದ್ದೇನೆ. ಇದೀಗ ಜನರ ತೀರ್ಪಿಗೂ ತಲೆಬಾಗುತ್ತೇನೆ ಎಂದ ಅವರು, ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಕಾರ್ಡ್, ಉಚಿತ ವಿದ್ಯುತ್, ಗೃಹಣಿಯರ ಮಾಸಿಕ ಭತ್ಯೆ, ಉಚಿತ ಅಕ್ಕಿ ಮತ್ತಿತ್ತರ ಭರವಸೆಗಳು ಬಿಜೆಪಿ ಗೆಲುವಿಗೆ ತೊಡಕಾಯಿತು. ಕಾಂಗ್ರೆಸ್ ಭರವಸೆಗಳು ಕಾರ್ಮಿಕ ವರ್ಗವನ್ನು ಸೆಳೆಯುವಲ್ಲಿ ಸಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.