ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವವು ಇಂದು ಜರಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಫೆ.೧ರಿಂದ ಆರಂಭವಾಗಿತ್ತು. ಶನಿವಾರ ಬೆಳಗ್ಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರತತ್ವ ಹೋಮ, ತತ್ತ್ವ ಕಲಶಪೂಜೆ, ಶಯ್ಯಾಪೂಜೆ, ಅಧಿವಾಸ ಹೋಮದ ಅಗ್ನಿಜನನ, ತತ್ತ್ವ ಕಲಶಾಭಿಷೇಕ, ಜೀವಕಲಶಪೂಜೆ, ಜೀವೋದ್ವಾಸನೆ, ಜೀವಕಲಶ ಶಯ್ಯಾನ್ನಯನ ಪೂಜೆ, ಅಂಕುರ ಪೂಜೆ, ಸಂಜೆ ವಾಸ್ತುಬಲಿ, ವಾಸ್ತುಹೋಮ, ಬ್ರಹ್ಮಕಲಶಪೂಜೆ, ಮಹಾಪೂಜೆ ಜರಗಿತು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ತಾಂತ್ರಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಭಾನುವಾರ ಬೆಳಗ್ಗೆ 108 ಕಾಯಿ ಮಹಾಗಣಪತಿ ಹೋಮ, ಪ್ರತಿಷ್ಠಾ ಪಾಣಿ, 8.30ರ ಕುಂಭಲಗ್ನ ಸುಮುಹೂರ್ತದಲ್ಲಿ ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾಬಲಿ ಜರಗಲಿದೆ. ಮಧ್ಯಾಹ್ನ ಮಹಾಪೂಜೆ, ಮಹಾಮಂತ್ರಾಕ್ಷತೆ ಜರಗಲಿದೆ. ಸಂಜೆ 6 ಗಂಟೆಯಿಂದ ಶ್ರೀದೇವರ ಬಲಿ ಉತ್ಸವ, ಬಟ್ಟಲುಕಾಣಿಕೆ ಪ್ರಸಾದ ವಿತರಣೆ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಕೋಳಿಕ್ಕಜೆ ಬಾಲಸುಬ್ರಹ್ಮಣ್ಯ ಭಟ್ ಬಳಗದವರಿಂದ ಭಕ್ತಿಸಂಗೀತ, ಮಧ್ಯಾಹ್ನ 12.30ರಿಂದ 1.30ರ ವತೆಗೆ ಕೆಡೆಂಜಿ ಶ್ರೀ ಮಹಾವಿಷ್ಣು ಭಜನಾ ಸಂಘದ ವಾರದ ಭಜನಾ ಮಂಗಳ ಹಾಗೂ ಮಧ್ಯಾಹ್ನ 1.30ರಿಂದ 6.30ರ ತನಕ ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಸೂರ್ಯರಶ್ಮಿ ಎಂಬ ಪೌರಾಣಿಕ ಕಥಾಭಾಗ ಪ್ರದರ್ಶನಗೊಳ್ಳಲಿದೆ.