ಜಾತಿಗಣತಿ ವರದಿ ತಿರಸ್ಕರಿಸುವಂತೆ ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ಪ್ರತಿಭಟನೆ

 ಹೊಸದಿಗಂತ ವರದಿ, ದಾವಣಗೆರೆ:

ಅವೈಜ್ಞಾನಿಕವಾದ ಕಾಂತರಾಜ ಆಯೋಗದ ಜಾತಿಗಣತಿ ವರದಿ ತಿರಸ್ಕರಿಸುವಂತೆ ಆಗ್ರಹಿಸಿ ಹಾಗೂ ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದನ್ನು ಖಂಡಿಸಿ ಬ್ರಾಹ್ಮಣ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಡಿಸಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.

ಕಳೆದ 10 ವರ್ಷಗಳ ಹಿಂದೆ ಕಾಂತರಾಜ್ ಆಯೋಗ ಕೈಗೊಂಡ ಜಾತಿ ಜನಗಣತಿ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಅದರಲ್ಲಿ ಬ್ರಾಹ್ಮಣ ಸಮಾಜದ ಜನಸಂಖ್ಯೆಯನ್ನು 17,83,428 ಮಾತ್ರ ತೋರಿಸಿದ್ದು, ಶೇ.2.98ರಷ್ಟು ಮಾತ್ರ ಇರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಮೀಕ್ಷೆ ಬಗ್ಗೆ ಇಡೀ ರಾಜ್ಯವ್ಯಾಪಿ ಬಹುತೇಕ ಎಲ್ಲಾ ಜಾತಿ, ಸಮುದಾಯಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಜಾತಿಗಣತಿ ವೈಜ್ಞಾನಿಕವಾಗಿ ನಡೆದಿಲ್ಲವೆಂಬ ಮಾತು ಕೇಳಿ ಬರುತ್ತಿದೆ. ಮನೆ-ಮನೆಗೂ ಭೇಟಿ ನೀಡಿ ಸಮೀಕ್ಷೆ ಮಾಡಿಲ್ಲ. ಇಂತಹ ವರದಿಯನ್ನು ತಿರಸ್ಕರಿಸಿ ಮತ್ತೊಮ್ಮೆ ವೈಜ್ಞಾನಿಕವಾಗಿ, ವ್ಯವಸ್ಥಿತವಾಗಿ ಜಾತಿ ಜನಗಣತಿ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕಳೆದ ಏ.16ರಂದು ಸಿಇಟಿ ಪರೀಕ್ಷೆಗೆಂದು ತೆರಳುತ್ತಿದ್ದ ಬ್ರಾಹ್ಮಣ ವಿದ್ಯಾರ್ಥಿಗಳು ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನೇ ತೆಗೆಸಿ ಹಾಕಿದ್ದು ಅಕ್ಷಮ್ಯ. ಬೀದರ್ ಪರೀಕ್ಷಾ ಕೇಂದರ್ದಲ್ಲಿ ಇದೇ ಕಾರಣಕ್ಕೆ ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆಯದೇ, ಆತನ ಭವಿಷ್ಯವೇ ಮಂಕಾಗಿರುವುದು ದುರಂತ. ಹೀಗೆ ಗಾಯತ್ರಿ ಮಂತ್ರ ದೀಕ್ಷೆ ಪಡೆದು, ಆತ್ಮ ಸಾಕ್ಷಾತ್ಕಾರದ ಪರಮ ಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ, ತೆಗೆಯಲು ಒತ್ತಡ ಹೇರಿ, ಅವಮಾನಕರವಾಗಿ ವರ್ತಿಸಿದವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಡಾ.ಸಿ.ಕೆ.ಆನಂದ ತೀರ್ಥಾಚಾರ್, ನಗರ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ಎಂ.ಸಿ.ಶಶಿಕಾಂತ್, ಜಿಲ್ಲಾಧ್ಯಕ್ಷ ಡಾ.ಬಿ.ಟಿ.ಅಚ್ಯುತ್, ಡಾ.ಎಸ್.ಆರ್.ಹೆಗಡೆ, ಡಾ.ಸುರೇಶ ಬಾಬು, ಪಿ.ಸಿ.ಶ್ರೀನಿವಾಸ ಭಟ್, ಪಿ.ಸಿ.ರಾಮನಾಥ, ಅನಿಲ್ ಬಾರೆಂಗಳ್, ಗುರುರಾಜ ಆಚಾರ್, ಪ್ರಸನ್ನ, ಪ್ರದೀಪ್, ಮಾಧವ ಪದಕಿ, ಉಮೇಶ ಕುಲಕರ್ಣಿ, ಡಿ.ಶೇಷಾಚಲ, ಬಾಲಕೃಷ್ಣ ವೈದ್ಯ, ರಾಘವೇಂದ್ರ, ಪೃಥ್ವಿ ಹೊಳ್ಳ, ವಿನಯ್ ಪದಕಿ, ಗೋಪಾಲಕೃಷ್ಣ, ಸುಬ್ರಹ್ಮಣ್ಯ ಆಚಾರ್, ಸುಧನ್ವ ಭಾರದ್ವಾಜ್, ವಿಜಯಕುಮಾರ, ವಸಂತ, ಸುಮಂತ್, ಪ್ರವೀಣ ಕುಮಾರ, ರಮೇಶ ಕುಮಾರ, ಸುಬ್ರಹ್ಮಣ್ಯ, ಕೃಷ್ಣಪ್ರಸಾದ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!