ಹೊಸದಿಗಂತ ವರದಿ,ದಾವಣಗೆರೆ:
ಪ್ರಕರಣವೊಂದರ ಆರೋಪ ಪಟ್ಟಿಯಿಂದ ಮೂವರ ಹೆಸರು ಕೈಬಿಡಲು 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, 50 ಸಾವಿರ ರು. ಪಡೆಯುತ್ತಿದ್ದ ವೇಳೆ ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸೈ ಲೋಕಾಯುಕ್ತರ ಗಾಳಕ್ಕೆ ಹಣದ ಸಮೇತ ಸಿಕ್ಕಿ ಬಿದ್ದಿದ್ದಾರೆ.
ಕೆಟಿಜೆ ನಗರ ಠಾಣೆಯ ಎಎಸೈ ಈರಣ್ಣ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದವರು. ಪ್ರಕರಣವೊಂದರಲ್ಲಿ ಮಣಿಕಂಠ ಆಚಾರ್ಯ, ತಾಯಿ ಭಾಗಮ್ಮ ಆಚಾರ್ಯ ಹಾಗೂ ಪತ್ನಿ ಅರ್ಚನಾ ಮಣಿಕಂಠ ಆಚಾರ್ಯರ ಹೆಸರನ್ನು ಚಾರ್ಜ್ ಶೀಟ್ ನಿಂದ ಕೈಬಿಡಲು ಎಎಸೈ ಈರಣ್ಣ 1 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, 50 ಸಾವಿರ ರೂ. ಮುಂಗಡ ನೀಡುವಂತೆ ಕೇಳಿದ್ದರು. ಈ ಬಗ್ಗೆ ಮಣಿಕಂಠ ಆಚಾರ್ಯ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಂಗಳವಾರ ಪಿರ್ಯಾದಿ ಮಣಿಕಂಠ ಆಚಾರ್ಯರಿಂದ 50 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಕೆಟಿಜೆ ನಗರ ಠಾಣೆ ಎಎಸೈ ಈರಣ್ಣನನ್ನು ಲೋಕಾಯುಕ್ತ ಪೊಲೀಸರು ಲಂಚದ ಹಣದ ಸಮೇತ ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ಮಾರ್ಗದರ್ಶನದಲ್ಲಿ ಉಪಾಧೀಕ್ಷಕಿ ಕಲಾವತಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಸಿ.ಮಧುಸೂದನ, ಪ್ರಭು ಬ.ಸೂರಿನ, ಪಿ.ಸರಳಾ ಹಾಗೂ ಸಿಬ್ಬಂದಿ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.