ಹೊಸದಿಗಂತ ವರದಿ,ಕಲಬುರಗಿ:
ಕಮಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಬಸ್ ಅಪಘಾತದಲ್ಲಿನ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯ ವೈದ್ಯರಿಗೆ ಕೇಂದ್ರ
ರಾಸಾಯನಿಕ, ರಸಗೊಬ್ಬರ ಹಾಗೂ ನೂತನ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಹಾಗೂ ಬೀದರ ಸಂಸದ ಭಗವಂತ ಖೂಬಾ ಅವರು ಸೂಚಿಸಿದರು.
ಶುಕ್ರವಾರ ಸಂಜೆ ಯುನೈಟೆಡ್ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾಗಿರುವ 8 ಮಂದಿ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ಸ್ಥಿತಿ ವಿಚಾರಿಸಿದ ಸಚಿವರು, ನಾವು ನಿಮ್ಮೊಂದಿಗಿದ್ದೇವೆ. ಆಸ್ಪತ್ರೆಯ ಗಾಯಾಳುಗಳ ವೆಚ್ಚವನ್ನು ಜಿಲ್ಲಾಡಳಿತ ಭರಿಸಲಿದೆ
ಎಂದು ಹೇಳಿ ಅವರಿಗೆ ಧೈರ್ಯ ತುಂಬಿದರು.
ಬಸ್ನಲ್ಲಿ ಸಂಚರಿಸುತ್ತಿದ್ದ ಎಲ್ಲಾ 35 ಜನರು ತೆಲಂಗಾಣಕ್ಕೆ ಸೇರಿದವರರಾಗಿದ್ದು, ಗೋವಾದಿಂದ ಬಸ್ ಹೈದ್ರಾಬಾದ್ಗೆ
ತೆರಳುತ್ತಿತು. ಶುಕ್ರವಾರ ಬೆಳಿಗ್ಗೆ 6.30ಕ್ಕೆ ಅಪಘಾತ ಸಂಭವಿಸಿದ್ದು, ಇದಕ್ಕೆ ಬಸ್ ಚಾಲಕನ ಬೇಜಬ್ದಾರಿಯೇ ಎಂದು ತಿಳಿದು
ಬಂದಿದೆ ಎಂದರು.
ಬಸ್ ಅತಿ ವೇಗವಾಗಿ ಚಾಲನೆ ಮಾಡುತ್ತಿದ್ದುದೇ ಇದಕ್ಕೆ ಕಾರಣ ಎಂದ ಸಚಿವರು, ಪೊಲೀಸರು ಚಾಲಕನ್ನು ಬಂಧಿಸಿದ್ದು, ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ ಎಂದು ಅವರು ಹೇಳಿದರು.
ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ 7 ಮಂದಿ ಮೃತಪಟ್ಟಿದ್ದು, ಮೃತಪಟ್ಟವರ ಗುರುತುಪತ್ತೆ ಹಚ್ಚಿ ಸಂಬಂಧಿಕರಿಗೆ ಮೃತ
ದೇಹಗಳನ್ನು ಒಪ್ಪಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳು ಕ್ರಮಕೈಗೊಂಡಿವೆ ಎಂದು ಅವರು ತಿಳಿಸಿದರು.
ಕರ್ನಾಟಕ ಮುಖ್ಯಮಂತ್ರಿಗಳು, ತೆಲಂಗಾಣ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಸರ್ಕಾರದ ಸಂಬಂಧಪಟ್ಟ
ಇಲಾಖೆಯೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ಸಚಿವರು ಈ ಸಂದರ್ಭದಲ್ಲಿ ನೀಡಿದರು.