ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಗಲಭೆಗೆ ಕಾರಣವಾದ ಕಲ್ಲುತೂರಾಟಗಾರರಿಗೆ ಸಂಬಂಧಿಸಿದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ತೆರವುಗೊಳಿಸುತ್ತಿರುವುದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿದೆ ಹಾಗೂ ಈ ಕುರಿತು ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ಮೂರು ದಿನ ಕಾಲಾವಕಾಶ ನೀಡಿದೆ.
ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಬುಲ್ಡೋಜರ್ ಬಳಸಲಾಗುತ್ತಿದೆ, ತೆರವು ಮಾಡುವಾಗ ತಮಗೆ ನೋಟೀಸ್ ನೀಡಿಲ್ಲ ಆದ್ದರಿಂದ ಈ ತೆರವು ಕಾರ್ಯ ನಡೆಯದಂತೆ ತಡೆಯಬೇಕು ಎಂದು ಜಮಿಯತ್-ಉಲಮಾ-ಐ-ಹಿಂದ್ ವತಿಯಿಂದ ಸುಪ್ರಿಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ಎಎಸ್ ಬೋಪಣ್ಣ ಹಾಗೂ ಜಸ್ಟೀಸ್ ವಿಕ್ರಮ ನಾಥ್ ಅವರಿದ್ದ ದ್ವಿಸದಸ್ಯ ಪೀಠವು “ಪ್ರತಿವಾದಿಗಳಿಗೆ (ಸರ್ಕಾರ) ಅವರ ಆಕ್ಷೆಪಣೆ ಸಲ್ಲಿಸಲು ಸಮಯ ನೀಡಲಾಗುತ್ತದೆ. ಮುಂದಿನ ವಿಚಾರಣೆಯ ಒಳಗೆ ಸರ್ಕಾರವು ತನ್ನ ಕ್ರಮದ ಕುರಿತು ಅಫಿಡವಿಟ್ ಸಲ್ಲಿಸಬೇಕು. ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬರ ಕುಂದು ಕೊರತೆಗಳನ್ನೂ ವಿಚಾರಿಸಲಾಗುತ್ತದೆ” ಎಂದು ಹೇಳಿದೆ.
ಅಲ್ಲದೇ ತೆರವು ಕಾರ್ಯಕ್ಕೆ ತಡೆಕೋರಿರುವ ಕುರಿತು ಪ್ರತಿಕ್ರಿಯಿಸಿದ ಕೋರ್ಟ್ “ತೆರವು ಕಾರ್ಯಕ್ಕೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಆದರೆ ಇದು ಕಾನೂನಾತ್ಮಕವಾಗಿ ನಡೆಯುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಬೇಕು” ಎಂದಿದೆ. ಮತ್ತು ಈ ಸಂಬಂಧ ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ.