ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿ ಜನ ಗಣತಿ ತ್ವರಿತವಾಗಿ ನಿರ್ಧಾರ ಮಾಡುವ ವಿಷಯವಲ್ಲ. ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇನ್ನಷ್ಟು ಸಮಯ ಹಿಡಿಯಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಗಣತಿ ವಿಚಾರದಲ್ಲಿ ಆತಂಕವೂ ಇಲ್ಲ, ಅವಸರವೂ ಬೇಕಿಲ್ಲ. ಸಮಗ್ರವಾಗಿ ಚರ್ಚೆ ನಡೆದು, ತೀರ್ಮಾನಕ್ಕೆ ಬರಲು ಒಂದು ವರ್ಷವಾದರೂ ಬೇಕಾಗುತ್ತದೆ. ಸಂಪುಟ ಸಭೆಯಲ್ಲಿ ಯಾರೂ ವಾಗ್ವಾದ ನಡೆಸಿಲ್ಲ. ಅವರವರ ಸಮುದಾಯಗಳ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ ಎಂದರು.
ಕೆಲ ಜಾತಿಗಳ ಸಂಖ್ಯೆ ಕಡಿಮೆ ನಮೂದಾಗಿದೆ. ವಾಸ್ತವದಲ್ಲಿ ಹೆಚ್ಚಿದೆ ಎನ್ನುವುದು ಅವರ ವಾದ. ಮೀಸಲಾತಿಗಾಗಿ ವ್ಯತ್ಯಾಸ ಮಾಡಿಕೊಂಡಿರುವ ಸಾಧ್ಯತೆಯೂ ಇದೆ. ಕೆಲವರು ಮೀಸಲಾತಿಗಾಗಿ ನೈಜ ಜಾತಿ ಮರೆಮಾಚುವ ಕೆಲಸ ಮಾಡಿರಬಹುದು. ಇದು ಆಯೋಗದ ಲೋಪವಲ್ಲ. ಇಂತಹ ಸಮಸ್ಯೆಗಳನ್ನು ಬಗೆಹರಿಸಿಕೊಂಡು ನಿರ್ಧಾರ ಮಾಡಲಾಗುತ್ತದೆ ಎಂದರು.