ಹೊಸದಿಗಂತ ವರದಿ, ಮಂಗಳೂರು:
ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಗ್ರಾಮದ ದೋಟ ಎಂಬಲ್ಲಿ ಜುಲೈ 21ರಂದು ಮುಂಜಾನೆ ದನ ಕಳ್ಳತನ ನಡೆಸಿದ ಐವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಗುರುನಗರ ಬಂಗ್ಲೆಗುಡ್ಡೆ ಭಜನಾ ಮಂದಿರ ಬಳಿಯ ನಿವಾಸಿ ಮಹಮ್ಮದ್ ಅಶ್ಪಕ್ ಯಾನೆ ಶಮೀರ್ ಯಾನೆ ಚಮ್ಮಿ (22), ಗುರುಪುರ ಅಡ್ಡೂರು ಸರಕಾರಿ ಶಾಲೆ ಹಿಂಬದಿಯ ಅದ್ಯಪಾಡಿ ನಿವಾಸಿ ಅಜರುದ್ದೀನ್ ಯಾನೆ ಅಜರ್ (31), ಜಲ್ಲಿಗುಡ್ಡೆ ಬಜಾಲ್ಪಡ್ಪು ನಿವಾಸಿ ಸುಹೈಲ್ (19), ಬಜಾಲ್ ಪಕ್ಕಲಡ್ಕ ಯುವಕ ಮಂಡಲ ಹಿಂಭಾಗದ ನಿವಾಸಿ ಮೊಹಮ್ಮದ್ ಅಫ್ರೀದ್ (25), ಬಜಾಲ್ ಕಟ್ಟಪುಣಿ ನಿವಾಸಿ ಶಾಹೀದ್ ಯಾನೆ ಚಾಯಿ (19) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ಕತ್ತಿ, ಹಗ್ಗಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಜಾಲ್ ಕಾನಕರಿಯ ಎಂಬಲ್ಲಿ ಅಶ್ವಿನ್ ಎಂಬವರ ದನದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಬಿಳಿ ಕಂದು ಮಿಶ್ರಿತ ದನವನ್ನು ಜುಲೈ ೨೭ರಂದು ಮುಂಜಾನೆ ಕಳವು ಮಾಡಲಾಗಿತ್ತು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೀಗ ಐವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.