ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿ.ಕೆ. ಶಿವಕುಮಾರ್ ಅವರ ಮಾಲೀಕತ್ವದ ಶಿಕ್ಷಣ ಸಂಸ್ಥೆಗೆ ಸಿಬಿಐ ದಾಳಿ ನಡೆಸಿದ್ದು, ಕಾಂಗ್ರೆಸ್ ಖಂಡಿಸಿದೆ.
ಕಾಂಗ್ರೆಸ್ ನಾಯಕರನ್ನು ಮಟ್ಟ ಹಾಕಲು ಬಿಜೆಪಿ ಐಟಿ, ಇ.ಡಿ., ಸಿಬಿಐಯಂಥ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ.
ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಪ್ರಧಾನ ಕಚೇರಿ ಮತ್ತು ಇತರ ಕಚೇರಿಗಳಿಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆ , ಬಿಜೆಪಿಯವರು ಐಟಿ, ಇ.ಡಿ., ಸಿಬಿಐ ಮೊದಲಾದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದೆಷ್ಟೋ ಜನರನ್ನು ಈ ಇಲಾಖೆಗಳ ಮೂಲಕ ಹೆದರಿಸಿ ಬೆದರಿಸಿ ಜೀವ ಹಿಂಡುತ್ತಿದ್ದಾರೆ. ಕಾಂಗ್ರೆಸ್ ನವರನ್ನು ಇದರಲ್ಲಿ ಸಿಕ್ಕಿಹಾಕಿಸಲು ಬಿಜೆಪಿ ಸಾಕಷ್ಟು ಕಟ್ಟಪಟ್ಟಿದೆ ಎಂದು ಹೇಳಿದರು. ನಾವು ಇಂಥ ತಂತ್ರಗಳಿಗೆ ಹೆದರುತ್ತೇವೆ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಬಿಜೆಪಿಯವರಿಗೆ ಹೆದರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.