ಹೊಸದಿಗಂತ ವರದಿ, ಅಂಕೋಲಾ:
ಸುಮಾರು ನೂರು ವರ್ಷಗಳ ಹಿಂದೆಯೇ ಯಕ್ಷಗಾನದ ಗಂಡು ಮೆಟ್ಟಿನ ನೆಲ ಎನಿಸಿರುವ ಅಂಕೋಲಾ ತಾಲೂಕಿನ ಸುತ್ತ ಮುತ್ತಲಿನ ಪ್ರಸಿದ್ಧ ಕಾಲಾವಿದರ ಕೂಡುವಿಕೆಯಲ್ಲಿ ವೃತ್ತಿಪರ ಮೇಳವಾಗಿ ತಿರುಗಾಟ ನಡೆಸಿದ ಸುಭೋಧ ಯಕ್ಷಗಾನ ಮಂಡಳಿಯು ಇಲ್ಲಿಯವರೆಗೆ ಅತ್ಯುತ್ತಮ ಸಮರ್ಥ ಹವ್ಯಾಸಿ ಕಲಾವಿದರನ್ನು ಯಕ್ಷರಂಗಕ್ಕೆ ಕೊಡುಗೆಯಾಗಿ ನೀಡಿದೆ.
ಬಾಸಗೋಡ ಸುತ್ತ ಮುತ್ತಲಿನ ಪರಿಸರ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದು ಬಹುತೇಕ ಸ್ವಾತಂತ್ರ್ಯ ಹೋರಾಟಗಾರರ ಕೂಡುವಿಕೆಯಲ್ಲಿ ಪ್ರಾರಂಭವಾದ ಸುಬೋಧ ಯಕ್ಷಗಾನ ಮಂಡಳಿ ಶತಮಾನೋತ್ಸವದ ನೆನಪನ್ನು ಸದಾ ಸ್ಮರಣೀಯವಾಗಿಸುವ ಉದ್ದೇಶದಿಂದ ಸುಬೋಧ ಯಕ್ಷಗಾನ ಗ್ರಂಥಾಲಯ ತಲೆ ಎತ್ತಿ ನಿಂತಿದ್ದು ಗೋಕರ್ಣದ ಖ್ಯಾತ ಕಲಾವಿದ ರವಿ ಗೌಡ ಅವರ ಕೈಚಳಕದ ರಂಗಿನಲ್ಲಿ ಆಕರ್ಷಕವಾಗಿ ಶೋಭಿಸುತ್ತಿದೆ.
ಯಕ್ಷಗಾನದ ಹಳೆಯ ಪ್ರಸಂಗಗಳು ಸೇರಿದಂತೆ ಎಲ್ಲಾ ಪ್ರಮುಖ ಪ್ರಸಂಗಗಳ ಪುಸ್ತಕಗಳು,
ವಿವಿಧ ಬರಹಗಾರರ ಯಕ್ಷಗಾನ ಸಂಬಂದಿಸಿದ ಪುಸ್ತಕಗಳು ರಾಮಾಯಣ ಮಹಾಭಾರತದಂತ ಪುರಾಣ ಕಥಾನಕ ಗ್ರಂಥಗಳನ್ನು ಸಂಗ್ರಹಿಸಿ ಓದುಗರಿಗೆ ಓದಗಿಸುವ ಒಂದು ಅತ್ಯುತ್ತಮ ಪ್ರಯತ್ನ ಸಂಘಟಕರಿಂದ ನಡೆದಿದೆ.
ಯಕ್ಷಗಾನ ಸಪ್ತಾಹದಲ್ಲಿ ಡಿಸೆಂಬರ್ 24 ರಂದು ಸಂಜೆ ಶ್ರೀರಾಮಾಂಜನೇಯ, ಡಿಸೆಂಬರ್ 25 ರಂದು ಶೂರ್ಪನಖಿ ವಿವಾಹ, ಡಿಸೆಂಬರ್ 26 ರಂದು ಚಂದ್ರಾವಳಿ ವಿಲಾಸ, ಡಿಸೆಂಬರ್ 27 ರಂದು ವಿಶ್ವಾಮಿತ್ರ ಮೇನಕೆ,ಡಿಸೆಂಬರ್ 28 ರಂದು ಭೀಷ್ಮ ವಿಜಯ, ಡಿಸೆಂಬರ್ 29 ರಂದು ಶ್ರೀರಾಮ ನಿರ್ಯಾಣ ಮತ್ತು ಡಿಸೆಂಬರ್ 30 ರಂದು ಸತ್ಯ ಹರಿಶ್ಚಂದ್ರ ಯಕ್ಷಗಾನ ಪ್ರಸಂಗಗಳು ತೆಂಕು ಮತ್ತು ಬಡಗಿನ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ನಡೆಯಲಿದೆ.