ಹೊಸದಿಗಂತ ಡಿಜಿಟಲ್ ಡೆಸ್ಕ್:
ತೋಳಿನ ಮೇಲಿದ್ದ ‘ಟ್ಯಾಟೂ’ ಯುವಕನೊಬ್ಬನಿಗೆ ಕೆಲಸ ಸಿಗದಂತೆ ಮಾಡಿದೆ. ಕೈ ಮೇಲಿರುವ ಟ್ಯಾಟೂ ತೆಗೆದರೆ ಮಾತ್ರ ಕೆಲಸ ನೀಡುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಟ್ಯಾಟೂ ತೆಗೆಯಲು ಇಚ್ಛಿಸದ ಯುವಕ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಅಂದ ಹಾಗೆ ಯುವಕನ ಕೈಯಲ್ಲಿರುವ ಹಚ್ಚೆ ಧಾರ್ಮಿಕ ಸಂಕೇತ ಎಂಬುದು ಗಮನಾರ್ಹ.
ಕೇಂದ್ರ ಪೊಲೀಸ್ ಪಡೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಾನ್ಸ್ಟೆಬಲ್ ಮತ್ತು ಇತರ ಪಡೆಗಳ ಹುದ್ದೆಗೆ ಅನರ್ಹ ಎಂದು ಘೋಷಿಸಲಾದ ಯುವಕ ದೆಹಲಿ ಹೈಕೋರ್ಟ್ನಲ್ಲಿ ಅಧಿಕಾರಿಗಳ ನಿರ್ಧಾರ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದಾನೆ. ಇದನ್ನು ನ್ಯಾಯಾಲಯಕ್ಕೆ ವಿವರಿಸಿದ ಅಧಿಕಾರಿಗಳ ಪರ ವಕೀಲರು, ಸೆಲ್ಯೂಟ್ ಮಾಡಲು ಕೈಯಲ್ಲಿ ಧಾರ್ಮಿಕ ಹಚ್ಚೆ ಹಾಕಿಸಿಕೊಂಡಿರುವುದು ಕೇಂದ್ರ ಗೃಹ ಸಚಿವಾಲಯದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ವಿವರಿಸಿದರು.
ಈ ಯುವಕ ವೈದ್ಯಕೀಯ ಪರೀಕ್ಷೆ, ಫಿಟ್ನೆಸ್ ಪರೀಕ್ಷೆಗಳು ಮತ್ತು ಕೆಲಸಕ್ಕೆ ಅಗತ್ಯವಿರುವ ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಿದ್ದು, ಯಾವುದೇ ನ್ಯೂನತೆಗಳಿಲ್ಲ ಎಂದು ಕಂಡುಬಂದಿದೆ. ಆತನ ಕೈಯಲ್ಲಿರುವ ಹಚ್ಚೆ ಮಾತ್ರ ಕಾರಣವಾದ್ದರಿಂದ ನ್ಯಾಯಾಲಯ ಹಚ್ಚೆ ತೆಗೆಯುವಂತೆ ಎರಡು ವಾರಗಳ ಕಾಲ ಗಡುವು ನೀಡಿದೆ. ಕೋರ್ಟ್ ಆದೇಶಕ್ಕೆ ಒಪ್ಪಿದ ಯುವಕ ಹಚ್ಚೆ ತೆಗೆಸಿ ಎರಡು ವಾರಗಳಲ್ಲಿ ಹೊಸ ವೈದ್ಯಕೀಯ ಪರೀಕ್ಷೆಗಾಗಿ ಮಂಡಳಿಯ ಮುಂದೆ ಹಾಜರಾಗುವುದಾಗಿ ತಿಳಿಸಿದನು. ವೈದ್ಯಕೀಯ ಮಂಡಳಿ ಯುವಕ ನೇಮಕಾತಿಗೆ ಅರ್ಹ ಎಂದು ನಿರ್ಧರಿಸಿದರೆ, ಕಾನೂನು ಪ್ರಕಾರ ನೇಮಕ ಮಾಡಿಕೊಳ್ಳಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದೆ.