ಛತ್ರಪತಿ ಶಿವಾಜಿ ಭಾರತದ ಸ್ವಾಭಿಮಾನದ ಪ್ರತೀಕ : ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಸ್ವಾಭಿಮಾನ ಹಾಗೂ ಭಾರತದ ಏಕತೆ, ಅಖಂಡತೆಯ ಪ್ರತೀಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಅವರು ಇಂದು ಕರ್ನಾಟಕ ಮರಾಠ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಭಾರತ ದೇಶದ ವೀರ ಹೋರಾಟಗಾರ ಮೊಘಲ್ ಸಾಮ್ರಾಜ್ಯದ ವಿರುದ್ಧ ಸಮರ ಸಾರುವ ಮೂಲಕ ಇಡೀ ದೇಶವನ್ನು ವೀರ ಛತ್ರಪತಿ ಶಿವಾಜಿ ಮಹಾರಾಜರು ರಕ್ಷಣೆ ಮಾಡಿದರು. ಅವರ ದಿಟ್ಟತನದಿಂದ ಭಾರತದಲ್ಲಿ ಹಿಂದು ಸಾಮ್ರಾಜ್ಯ ಗಟ್ಟಿಯಾಗಿ ಉಳಿಯಲು ಸಾಧ್ಯವಾಯಿತು. ಸಮಾಜದ ಎಲ್ಲಾ ವರ್ಗದ ಜನರನ್ನೂ ಸಮಾನವಾಗಿ ನೋಡಿದ ಶಿವಾಜಿಯವರನ್ನು ಪ್ರತಿಯೊಬ್ಬ ಭಾರತೀಯನೂ ಪೂಜನೀಯ ಭಾವದಿಂದ ನೋಡುತ್ತಾನೆ. ಅವರ ಹೆಸರಿನಲ್ಲಿಯೇ ಸ್ಪೂರ್ತಿ, ಶಕ್ತಿ ಹಾಗೂ ಪ್ರೇರಣೆ ನೀಡುತ್ತದೆ. ಶಿವಾಜಿ ಮಹಾರಾಜರ ಅಭಿಮಾನದ ಸಂಕೇತವಾಗಿ ಜನ್ಮದಿನ ಆಚರಿಸಲಾಗಿದೆ.

ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಹಾಗೂ ರಾಷ್ಟ್ರಭಕ್ತಿಯ ಭಾವನೆ ತುಂಬುವ ಕೆಲಸ ಮಾಡಲಾಗುವುದು. ಮರಾಠ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಗಿದ್ದು, ಮಾಣಿಕ್ ರಾವ್ ಮೂಳೆಯವರನ್ನು ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಧ್ವನಿಯಿಲ್ಲದ ದುರ್ಬಲ ವರ್ಗಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುವುದು ಸರಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.

ಹೈಕೋರ್ಟ್ ಆದೇಶದ ಪರಿಪಾಲನೆ ಎಲ್ಲರ ಕರ್ತವ್ಯ:
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲಾಗುತ್ತಿರುವ ಬಗ್ಗೆ ಪ್ರತಿಕ್ರಯಿಸಿದ ಮುಖ್ಯಮಂತ್ರಿಗಳು, ಉಚ್ಛ ನ್ಯಾಯಾಲಯದ ಆದೇಶದ ಪರಿಪಾಲನೆ ಎಲ್ಲರ ಕರ್ತವ್ಯ. ಹೊರಗಿನವರಿಂದ ಎಲ್ಲ ಸಮಸ್ಯೆಗಳು ಉಂಟಾಗುತ್ತಿದೆ. ಹೊರಗಿನವರು ಅನಗತ್ಯ ಪ್ರವೇಶದಿಂದಾಗಿ ಎಲ್ಲ ಗೊಂದಲಗಳು ಏಳುತ್ತಿವೆ. ಶಾಲಾ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳೇ ಈ ವಿಷಯವನ್ನು ಬಗೆಹರಿಸಿಕೊಳ್ಳುತ್ತಾರೆ. ವಾತಾವರಣ ತಿಳಿಯಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಎಲ್ಲಾ ಮಾಹಿತಿಗಳನ್ನು ಪಡೆಯುತ್ತಿದ್ದೇನೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ , ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಮಾಜಿ ಶಾಸಕ ಎಂಜಿ ಮೂಳೆ, ಮರಾಠಾ ಸಮುದಾಯದ ಮುಖಂಡ ಮನೋಜ ಕುಮಾರ ಮತ್ತು ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!