ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಇನ್ನು ಮುಂದೆ ₹100 ಕೋಟಿಗಿಂತ ಹೆಚ್ಚು ಅನುದಾನವಿರುವ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮೌಲ್ಯಮಾಪನ ಮಾಡಲು ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರಕ್ಕೆ ಈ ಜವಾಬ್ದಾರಿ ಒಪ್ಪಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಎಸ್.ಸುರೇಶ್ ಕುಮಾರ್, 24 ಇಲಾಖೆಗಳಲ್ಲಿ 96 ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. 2020-21ನೇ ಸಾಲಿನಲ್ಲಿ 39,601 ಕೋಟಿ ರೂ.ಗಳಲ್ಲಿ ಕೇಂದ್ರದ ಪಾಲು 18,100 ಕೋಟಿ ರೂ., 2021-22 ರಲ್ಲಿ ಒಟ್ಟು ಅನುದಾನ 38,078 ಕೋಟಿ ರೂ.ಗಳ ಪೈಕಿ ಕೇಂದ್ರದ ಪಾಲು 17 ಸಾವಿರ ಕೋಟಿ ರೂ.ಗಳಾಗಿದೆ. 11 ಕೇಂದ್ರ ಪುರಸ್ಕೃತ ಕಾರ್ಯಕ್ರಮ ಪರಿಶೀಲಿಸಿದ್ದಾರೆ. ಗ್ರಾಮ ಸಡಕ್ ಯೋಜನೆ, ಕುಡಿವ ನೀರಿನ ಕಾರ್ಯಕ್ರಮ, ಮಧ್ಯಾಹ್ನದ ಬಿಸಿಯೂಟ, ಸಮಗ್ರ ಶಿಕ್ಷಣ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಜ್ಯ ವಿಪತ್ತು ನಿಧಿಗೆ ಸಹಾಯಧನ, ಪೂರಕ ಪೌಷ್ಠಿಕಾಂಶ ಕಾರ್ಯಕ್ರಮ, ಪ್ರಧಾನ ಮಂತ್ರಿ ಅವಾಜ್ ಯೋಜನಾ ಕಾರ್ಯಕ್ರಮಗಳ ಪ್ರಗತಿಯನ್ನು ಸಿಎಂ ಪರಿಶೀಲನೆ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ವಿವರಿಸಿದರು.
ಈವರೆಗೆ ರಾಜ್ಯಕ್ಕೆ 1289 ಕೋಟಿ ರೂ. ಬಿಡುಗಡೆಯಾಗಿದೆ. ಕಳೆದ ವರ್ಷ ಭೌತಿಕ ಪ್ರಗತಿ ನೂರರಷ್ಟು ಸಾಧಿಸಲಾಗಿದೆ. ನರೇಗಾದಡಿ ಜುಲೈ 18ರ ವರೆಗೆ 6 ಕೋಟಿ ಮಾನವ ದಿನ ಸೃಜಿಸಲಾಗಿದೆ. ಗ್ರಾಮ ಸಡಕ್ ಯೋಜನೆಯಡಿ ಪ್ರಸಕ್ತ ವರ್ಷ 5011 ಕಿ.ಮೀ ರಸ್ತೆ ನಿರ್ಮಾಣದ ಗುರಿಯಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು.