ಹೊಸ ದಿಗಂತ ವರದಿ, ಚಿಕ್ಕಬಳಾಪುರ:
ಕಾಂಗ್ರೆಸ್ ಪಕ್ಷದ ಮೂರನೆ ಪಟ್ಟಿ ಬಿಡುಗಡೆಯಾಗಿದ್ದು, ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರದೀಪ್ ಈಶ್ವರ್ ಹೆಸರನ್ನು ಘೋಷಣೆ ಮಾಡಲಾಗಿದೆ.
ಪರಿಶ್ರಮ ನೀಟ್ ಅಕಾಡೆಮಿಯ ಸಂಸ್ಥಾಪಕ ಪ್ರದೀಪ್ ಈಶ್ವರ್ ಗೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳಿಗೆ ಶಾಕ್ ನೀಡಿದೆ.
ಮೆಡಿಕಲ್ ಮಿನಿಸ್ಟರ್ ವರ್ಸ್ಸಸ್ ಮೆಡಿಕಲ್ ಕೋಚಿಂಗ್ ಟೀಚರ್!
ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರದೀಪ್ ಈಶ್ವರ್ ಹೆಸರು ಘೋಷಣೆಯಾಗಿದ್ದು, ಹಲವು ದಿನಗಳಿಂದ ನಡೆಯುತ್ತಿದ್ದ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. ಮೆಡಿಕಲ್ ಮಿನಿಸ್ಟರ್ ವರ್ಸಸ್ ಮೆಡಿಕಲ್ ವಿದ್ಯಾರ್ಥಿಗಳ ಸಿಇಟಿ ಕೋಚಿಂಗ್ ಟೀಚರ್ ಫೈಟ್ ಯಾವ ಮಟ್ಟಕ್ಕೆ ಹೋಗುತ್ತದ್ದಯೋ ಎಂಬ ಕುತೂಹಲ ಕ್ಷೇತ್ರದಲ್ಲಿ ಮನೆ ಮಾಡಿದಂತಾಗಿದೆ.
ವಿನಯ್ ಶಾಮ್ ಗೆ ಕೈ ತಪ್ಪಿದ ಟಿಕೆಟ್
ಚಿಕ್ಕಬಳ್ಳಾಪುರ ಕಾಂಗ್ರೆಸ್ನ ಪ್ರಬಲ ಟಿಕೆಟ್ ಅಕಾಂಕ್ಷಿಯಾಗಿದ್ದ ವಿನಯ್ ಶಾಮ್ ಗೆ ಕಾಂಗ್ರೇಸ್ ಕೈ ಕೊಟ್ಟಿದೆ. ಮುಳಬಾಗಿಲಿನ ಕೊತ್ತೂರು ಮಂಜುನಾಥ್ ಅಥವಾ ವಿನಯ್ ಶಾಮ್ ಗೆ ಕಾಂಗ್ರೆಸ್ ಮಣೆಯಾಕಲಿದೆ ಎಂಬ ಚರ್ಚೆ ಜೋರಾಗಿತ್ತು. ಆದರೆ ಅನಿರೀಕ್ಷಿತವಾಗಿ ಪ್ರದೀಪ್ ಈಶ್ವರ್ ಹೆಸರು ಪ್ರಸ್ತಾಪವಾಗಿತ್ತು. ಸ್ಥಳಿಯ ನಾಯಕರಾದ ಗೌರಿಬಿದನೂರಿನ ಶಿವಶಂಕರೆಡ್ಡಿ, ಚಿಂತಾಮಣಿ ಸುಧಾಕರ್ ಸೇರಿದಂತೆ ಹಲವರು ಪ್ರದೀಪ್ ಈಶ್ವರ್ ಅವರನ್ನು ಸಂಪರ್ಕಿಸಿ ಅವರಿಗೆ ಕಾಂಗ್ರೆಸ್ ಟಿಕಿಟ್ ನೀಡಿದರೆ ಆರೋಗ್ಯ ಸಚಿವ ಸುಧಾಕರ್ ವಿರುದ್ದ ಸಮಬಲದ ಹೋರಾಟ ಸಾಧ್ಯವಾಗುತ್ತದೆ ಎಂಬುದನ್ನು ರಾಜ್ಯನಾಯಕರಿಗೆ ಮನದಟ್ಟು ಮಾಡಿಕೊಟ್ಟಿದ್ದರು ಎನ್ನಲಾಗುತ್ತಿದೆ.
ಕಾಂಗ್ರೆಸ್ ನಲ್ಲಿ ಬಂಡಾಯದ ಬಿಸಿ: ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯಾಗಿ ಪ್ರದೀಪ್ ಈಶ್ವರ್ ಹೆಸರು ಘೋಷಣೆ ಮಾಡುತ್ತಿದ್ದಂತೆ, ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ವಿನಯ್ ಶಾಮ್ ನಾಮ ಪತ್ರ ಸಲ್ಲಿಕೆ ಮಾಡಿ ರಾಜ್ಯ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ಗೆ ಬಂಡಾಯದ ಬೀತಿ ಎದುರಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ ಮತ್ತು ರಾಜ್ಯ ನಾಯಕರು ಬಂಡಾಯವನ್ನು ಹೇಗೆ ಶಮನ ಮಾಡುತ್ತಾರೋ ಕಾದುನೋಡಬೇಕಾಗಿದೆ.