ಹೊಸ ದಿಗಂತ ವರದಿ, ವಿಜಯನಗರ(ಕೊಟ್ಟೂರು):
ಎರಡು ಯುವಕರ ಗುಂಪುಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಕಾಳಾಪೂರ್ ಗ್ರಾಮದಲ್ಲಿ ಶನಿವಾರ ನಡೆದಿದ್ದು, ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ವೃದ್ಧೆಯೋಬ್ಬರು ಗಂಭೀರ ಗಾಯಗೊಂಡಿದ್ದಾರೆ. ನಿಂಗಯ್ಯ ಪೇದೆ ಗಾಯಗೊಂಡವರು.
ತರಳಬಾಳು ಹುಣ್ಣಿಮೆ ಮಹೋತ್ಸವ ಹಿನ್ನೆಲೆ ಸಿರಿಗೆರೆಯಿಂದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು, ಬೃಹತ್ ಬೈಕ್ ಮೆರವಣಿಗೆ ಮೂಲಕ ಕೊಟ್ಟೂರಿಗೆ ಕರೆತರಲಾಗುತ್ತಿತ್ತು. ಸಮೀಪದ ಉಜ್ಜನಿ ಗ್ರಾಮದಿಂದ ಸುಮಾರು 4ಕಿ.ಮೀ.ದೂರದ ಕಾಳಪೂರ ಗ್ರಾಮಕ್ಕೆ ತೆರಳಿತು.
ಯುವಕರ ಗುಂಪೊಂದು ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಮೇಲೆ ಏಕಾಏಕಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ಪ್ರತಿರೋಧವು ನಡೆದಿದೆ. ಈ ಘಟನೆಯಲ್ಲಿ ಪೊಲೀಸ್ ಪೇದೆ ನಿಂಗಯ್ಯ ಎನ್ನುವವರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗ್ರಾಮದ ವೃದ್ಧೆಯೋಬ್ಬರಿಗೂ ಘಟನೆಯಲ್ಲಿ ಬಲವಾದ ಪೆಟ್ಟು ಬಿದ್ದಿದ್ದು, ಇಬ್ಬರನ್ನೂ ಕೊಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಸುಮಾರು ಜನರಿಗೆ ಸಣ್ಣ ಪುಟ್ಟ ಗಾಯ ಗಳಾಗಿದ್ದು, ಕೆಲ ಯುವಕರ ಗುಂಪು ಮನೆ ಮುಂದೆ ನಿಲ್ಲಿಸಿದ ಬ್ಯಕ್ ಗಳನ್ನು ಜಖಂ ಗೊಳಿಸಿದ್ದಾರೆ. ಕೆಲ ಮನೆ ಗಳಿಗೆ ನುಗ್ಗಿದ ಯುವಕರು ಮನೆ ಬಾಗಿಲುಗಳನ್ನು ಮುರಿದಿದ್ದಾರೆ. ಕೆಲಕಲ್ಲು ತೂರಾಟ ನಡೆದಿದೆ. ಈ ಘಟನೆಯಿಂದ ಗ್ರಾಮಸ್ಥರು ಭಯ ಭೀತಿಗೊಂಡಿದ್ದು, ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ, ಸ್ಥಳದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದ್ದು, ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿದೆ.