ಹೊಸದಿಗಂತ ವರದಿ, ಉಡುಪಿ:
ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರ ಚತುರ್ಥ ಪರ್ಯಾಯದ ಅಂಗವಾಗಿ ಮಂಗಳವಾರ ಮುಂಜಾನೆ 2.15 ಕ್ಕೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದ ಪರ್ಯಾಯ ಪೀಠಾಧಿಪತಿ ಮೆರವಣಿಗೆಯಲ್ಲಿ ಸಾಗಿಬಂದು ಅಷ್ಟಮಠಾಧೀಶರ ಜೊತೆ ರಥಬೀದಿಯಲ್ಲಿ ಮುಂಜಾನೆ 4.30 ಕ್ಕೆ ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣದೇವರ ದರ್ಶನ ಮಾಡಿ, 4.45 ಕ್ಕೆ ಚಂದ್ರಮೌಳೀಶ್ವರ ದೇವರ ದರ್ಶನ, 5.00 ಕ್ಕೆ ಅನಂತೇಶ್ವರನ ದೇವರು ಮತ್ತು ಮಧ್ವಾಚಾರ್ಯರ ಸನ್ನಿಧಿಯ ದರ್ಶನ ನಡೆಸಿದರು.
5.25 ರ ಶುಭಾ ಮುಹೂರ್ತದಲ್ಲಿ ನಿರ್ಗಮನ ಪರ್ಯಾಯ ಪೀಠಾಧಿಪತಿ ಅದಮಾರು ಶ್ರೀ ಈಶಪ್ರಿಯತೀರ್ಥರು, ಶ್ರೀ ವಿದ್ಯಾಸಾಗರತೀರ್ಥರನ್ನು ಸ್ವಾಗತಿಸಿದರು
ಶ್ರೀಕೃಷ್ಣ ದೇವರ ದರ್ಶನ ಪಡೆದು ಕೃಷ್ಣಾಪುರ ಮಠದ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿ 5.35 ಕ್ಕೆ ಚಂದ್ರಶಾಲೆಯಲ್ಲಿ ಪರ್ಯಾಯ ಅದಮಾರು ಮಠದ ವತಿಯಿಂದ ಮಾಲಿಕೆ ಮಂಗಳಾರತಿ ನಡೆಯಿತು.
5.55 ಕ್ಕೆ ಮಧ್ವಾಚಾರ್ಯರ ಸನ್ನಿಧಿಯ ಎದುರು ಅದಮಾರು ಮಠಾಧೀಶರು ಕೃಷ್ಣಾಪುರ ಮಠಾಧೀಶರಿಗೆ ಅಕ್ಷಯ ಪಾತ್ರೆ ಹಸ್ತಾಂತರ ಮಾಡಿದರು. 5.55 ಕ್ಕೆ ನಾಲ್ಕನೇ ಬಾರಿಗೆ ಪವಿತ್ರ ಸರ್ವಜ್ಞ ಪೀಠರೋಹಣಗೈದರು. ನಂತರ 6.15 ಕ್ಕೆ ಬಡಗುಮಾಳಿಗೆ ಅರಳು ಗದ್ದುಗೆಯಲ್ಲಿ ಅಷ್ಟ ಮಠದ ಯತಿಗಳಿಗೆ ಪರ್ಯಾಯ ಪೀಠಾಧಿಪತಿ ಗಂಧಾದ್ಯುಪಚಾರ ನಡೆಸಿದರು. ಅಷ್ಟ ಮಠದ ಯತಿಗಳು ಕೃಷ್ಣಾಪುರ ಮಠದ ಪರ್ಯಾಯಕ್ಕೆ ಪಟ್ಟ ಕಾಣಿಕೆಯನ್ನು ನೀಡಿ ಮಾಲಿಕೆ ಮಂಗಳಾರತಿ ನಡೆಸಿದರು
ಶ್ರೀ ಕೃಷ್ಣಾಪುರ ಯತಿ ಶ್ರೀ ವಿದ್ಯಾಸಾಗರತೀರ್ಥರ ಚತುರ್ಥ ಪರ್ಯಾಯದ ಮೊದಲ ದಿನ ಶ್ರೀ ಕೃಷ್ಣನಿಗೆ ಬೆಳಗ್ಗೆ 10 ಗಂಟೆಗೆ ಮಹಾಪೂಜೆ ನೆರವೇರಿಸಿದರು. 10.30 ಪಲ್ಲಪೂಜೆ, ರಾತ್ರಿ 7.30 ಕ್ಕೆ ಬ್ರಹ್ಮರಥೋತ್ಸವ ನೆರವೇರಿತು.