ಹೊಸದಿಗಂತ ವರದಿ ವಿಜಯಪುರ:
ಈ ಹಿಂದೆ ಕಾಂಗ್ರೆಸ್ ಭಾರತ ತೋಡೋ ಮಾಡಿದೆ. ಈಗ ಜೋಡೋ ಯಾತ್ರೆ ಮಾಡುತ್ತಿರೋದು ವಿಪರ್ಯಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ರು. ನಗರದ ಸೈನಿಕ ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಈ ಹಿಂದೆ ಎರಡು ದೇಶಗಳನ್ನ ಬೇರ್ಪಡಿಸಿ ಭಾರತ ತೋಡೋ ಮಾಡಿದೆ ಎಂದು ದೂರಿದರು.
ಸಮಾಜದಲ್ಲಿ ಕಾಂಗ್ರೆಸ್ ಕ್ಷೋಭೆ ಉಂಟು ಮಾಡಿದೆ. ಭಾರತ ಒಡೆದ ಗಾಯದ ಬರೆಯನ್ನ ಯಾರೂ ಮರೆತಿಲ್ಲ. ಇದೀಗ ಅವರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ತನ್ನ
ಒಳ ಮರ್ಮ ಮುಚ್ಚಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ʻಭಾರತ ಜೋಡೋʼ ಹೆಸರನ್ನು ಬಳಕೆ ಮಾಡುತ್ತಿದೆ ಎಂದರು.
ಮೈಸೂರು ದಸರಾ ಮುಗಿದ ಕೂಡಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಜೊತೆಗೂಡಿ ಜಂಟಿ ಪ್ರವಾಸ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.