ಹೊಸದಿಗಂತ ವರದಿ, ಶ್ರೀರಂಗಪಟ್ಟಣ:
ಜೀವನಾಡಿ ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಾಗೀನ ಅರ್ಪಿಸಿದರು.
ಕಬಿನಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಲಿಕ್ಯಾಪ್ಟರ್ ಮೂಲಕ ಕೆ.ಆರ್.ಸಾಗರಕ್ಕೆ ಆಗಮಿಸಿದರು. ಬಳಿಕ ಅಲ್ಲಿಂದ ಕಾರಿನಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ ತೆರಳಿ ಸಂಪ್ರದಾಯಬದ್ಧವಾಗಿ ವಿಶೇಷ ಪೂಜೆ ಸಲ್ಲಿಸಿ ತುಂಬಿ ತುಳುಕುತ್ತಿದ್ದ ಕಾವೇರಿಗೆ ಬಾಗೀನ ಸಮರ್ಪಿಸಿದರು.
ಬೊಮ್ಮಾಯಿ ಅವರೊಟ್ಟಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅವರೂ ಸಹ ಬಾಗೀನ ಅರ್ಪಿಸಿದರು.
ಬಳಿಕ ಕನ್ನಂಬಾಡಿ ಅಣೆಕಟ್ಟೆ ಸಮೀಪದಲ್ಲೇ ನಿರ್ಮಿಸಲಾಗಿದ್ದ ವೇದಿಕೆಗೆ ಆಗಮಿಸಿ ನೆರೆದಿದ್ದ ಸಾರ್ವಜನಿಕರು, ರೈತರನ್ನುದ್ದೇಶಿಸಿ ಮಾತನಾಡಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಚಿವ ಮುನಿರಾಜು, ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ರವೀಂದ್ರಶ್ರೀಕಂಠಯ್ಯಘಿ, ಸಿ.ಎಸ್. ಪುಟ್ಟರಾಜು, ಜಿ.ಟಿ. ದೇವೇಗೌಡ, ಕೆ. ಸುರೇಶ್ಗೌಡ, ಎಂ. ಶ್ರೀನಿವಾಸ್, ಡಾ. ಕೆ. ಅನ್ನದಾನಿ, ಡಿ.ಸಿ. ತಮ್ಮಣ್ಣಘಿ, ಕೆ.ಟಿ. ಶ್ರೀಕಂಠೇಗೌಡ, ಅಪ್ಪಾಜಿಗೌಡ, ಸಾ.ರಾ. ಮಹೇಶ್, ಎನ್. ಮಹೇಶ್, ಚಿಕ್ಕಮಾದು, ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿ.ಪಂ. ಸಿಇಓ ದಿವ್ಯಾ ಪ್ರಭು, ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್, ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರ ಶಂಕರೇಗೌಡ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀರಂಗಪಟ್ಟಣದ ಶಾಶ್ವತಿ ಕ್ರಿಯಾ ಸಮಿತಿ ಮುಖ್ಯಸ್ಥ ಡಾ. ಬಾನುಪ್ರಕಾಶ್ ಶರ್ಮಾ ಮತ್ತು ತಂಡ ಬಾಗೀನ ಕಾರ್ಯಕ್ರಮದ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು.