ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿ ಎಎಪಿ ನಾಯಕ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಐದು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿದೆ. ಸಿಸೋಡಿಯಾ ಬಂಧನ ದೆಹಲಿ ಸಿಎಂ ಕೇಜ್ರಿವಾಲ್ಗೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಎಪಿ ಸರ್ಕಾರದಲ್ಲಿ ಸಿಸೋಡಿಯಾ 18 ಇಲಾಖೆಗಳನ್ನು ನೋಡಿಕೊಳ್ಳುತ್ತಿದ್ದರೆ, ಉಳಿದ ನಾಲ್ವರು ಸಚಿವರು 14 ಇಲಾಖೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಮುಂಬರುವ ಹಣಕಾಸು ವರ್ಷದ ಬಜೆಟ್ ಮಂಡನೆ ಸಂದರ್ಭ ಸಿಎಂ ಕೇಜ್ರಿವಾಲ್ ಸರ್ಕಾರಕ್ಕೆ ಸಿಸೋಡಿಯಾ ಬಂಧನ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಚರ್ಚೆಯಾಗುತ್ತಿದೆ.
ಸಿಸೋಡಿಯಾ ಬಂಧನದಿಂದ ಅವರ ಕೈಯಲ್ಲಿರುವ 18 ಇಲಾಖೆಗಳ ಕೆಲಸಗಳ ಮೇಲ್ವಿಚಾರಣೆಯ ಜವಾಬ್ದಾರಿ ಕೇಜ್ರಿವಾಲ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂಬ ಮಾತು ದೆಹಲಿಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಸತ್ಯೇಂದರ್ ಜೈನ್ ಅವರ ಬಂಧನದ ನಂತರ, ಕೇಜ್ರಿವಾಲ್ ಜೈನ್ ಖಾತೆಗಳನ್ನೂ ಮನೀಶ್ ಸಿಸೋಡಿಯಾ ಅವರಿಗೆ ಹಸ್ತಾಂತರಿಸಿದರು. ಇದರೊಂದಿಗೆ ಸತ್ಯೇಂದ್ರ ಜೈನ್ ನೇತೃತ್ವದ ಗೃಹ ಇಲಾಖೆಯೂ ಸಿಸೋಡಿಯಾ ಅವರ ಕಣ್ಗಾವಲಿನಲ್ಲಿದೆ. ಇದೀಗ ಸಿಸೋಡಿಯಾ ಅವರು 18 ಇಲಾಖೆಗಳ ಜವಾಬ್ದಾರಿಯನ್ನು ಇತರ ಸಚಿವರಿಗೆ ಹಸ್ತಾಂತರಿಸಬೇಕಾಗಿದೆ.
ಇನ್ನು ನಾಲ್ವರು ಸಚಿವರಿಗೆ ಸಿಸೋಡಿಯಾ ಉಸ್ತುವಾರಿಯಲ್ಲಿರುವ ಇಲಾಖೆಗಳನ್ನು ಹಸ್ತಾಂತರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂಬ ಮಾತು ದೆಹಲಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಆರೋಗ್ಯದ ದೃಷ್ಠಿಯಿಂದ ಗೋಪಾಲ್ ರಾಮ್ ಅವರಿಗೆ ಹಲವು ಇಲಾಖಾ ಜವಾಬ್ದಾರಿ ನೀಡುವ ನಿರೀಕ್ಷೆ ಇಲ್ಲ. ಡಿಟಿಸಿ ಬಸ್ ಖರೀದಿ ಪ್ರಕರಣದಲ್ಲಿ ಕೈಲಾಶ್ ಗೆಹ್ಲೋಟ್ ಕೂಡ ವಿಚಾರಣೆ ಎದುರಿಸುತ್ತಿದ್ದಾರೆ. ಇತರ ಇಬ್ಬರು ಇಮ್ರಾನ್ ಹುಸೇನ್ ಮತ್ತು ರಾಜ್ ಕುಮಾರ್ ಆನಂದ್ ಅನನುಭವಿ. ಇಂತಹ ಪರಿಸ್ಥಿತಿಯಲ್ಲಿ ಸಿಸೋಡಿಯಾ ಅವರಿಗೆ ಶೀಘ್ರವೇ ಕೋರ್ಟ್ ರಿಲೀಫ್ ಸಿಗದಿದ್ದರೆ ಆ ಇಲಾಖೆಗಳ ನಿರ್ವಹಣೆ ಅರವಿಂದ್ ಕೇಜ್ರಿವಾಲ್ ತಲೆನೋವಾಗೋದು ಗ್ಯಾರೆಂಟಿ.