15ನೇ ಆವೃತ್ತಿಯ ಐಪಿಎಲ್​​​ ಸಮಾರೋಪಕ್ಕೆ ವರ್ಣರಂಜಿತ ತೆರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

15ನೇ ಆವೃತ್ತಿಯ ಐಪಿಎಲ್​​​ ಫೈನಲ್​​ ಕದನಕ್ಕೂ ಮುನ್ನ ವೈಭವದ ಸಮಾರೋಪ ಸಮಾರಂಭಕ್ಕೆ ನಡೆದಿದ್ದು, ಮೂಲಕ ಈ ವರ್ಷದ ಆವೃತ್ತಿಗೆ ತೆರೆ ಬಿದ್ದಿದೆ.
ಇಂದು ಫೈನಲ್​​​ ಹಣಾಹಣಿಯಲ್ಲಿ ರಾಜಸ್ಥಾನ್​ ರಾಯಲ್ಸ್​-ಗುಜರಾತ್​ ಟೈಟನ್ಸ್​​ ಎದುರಾಗಲಿದ್ದು, ಇದ್ರ ಮೊದಲು ನಡೆದ ವರ್ಣರಂಜಿತ ಕಾರ್ಯಕ್ರಮ ಅಭಿಮಾನಿಗಳನ್ನು ತನ್ನತ್ತ ಸೆಳೆಯಿತು.
ಕಾರ್ಯಕ್ರಮ ನಡೆಸಿಕೊಟ್ಟ ಕಾಮೆಂಟೇಟರ್​​ ರವಿಶಾಸ್ತ್ರಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಐಪಿಎಲ್​ ಅಧ್ಯಕ್ಷ ಬ್ರಿಜೇಶ್​ ಪಟೇಲ್​ ಮತ್ತು ಫೈನಲ್​​ನಲ್ಲಿ ಕಾದಾಡುವ ಉಭಯ ನಾಯಕರನ್ನು ಸಹ ವೇದಿಕೆ ಆಹ್ವಾನಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಬಾಲಿವುಡ್‌ ಖ್ಯಾತ ನಟ ರಣ್‌ವೀರ್‌ ಸಿಂಗ್‌ ತಮ್ಮ ಅದ್ಭುತ ನೃತ್ಯದ ಮೂಲಕ ನಮೋ ಮೈದಾನದಲ್ಲಿ ನೆರೆದಿದ್ದ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ರಂಜಿಸಿದರು. ಬಳಿಕ ತಮಿಳಿನ ವಾಥಿಂಗ್​​ ಕಮಿಂಗ್​​​​​​ ಹಾಡು, RRRನ ನಾಟು ನಾಟು ಹಾಡಿಗೆ ಭರ್ಜರಿ ಸ್ಟೆಪ್ಸ್​ ಹಾಕಿ ಮನ ರಂಜಿಸಿದರು.
ಬಳಿಕ ಭಾರತದ 75ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಭಾರತೀಯ ಕ್ರಿಕೆಟ್​​ನ​ ಏಳು ದಶಕಗಳ ಕ್ರಿಕೆಟ್‌ ಪಯಣದ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿದ್ದು, ಕ್ರಿಕೆಟ್​ ಪ್ರಿಯರನ್ನು ಮನಸೂರೆಗೊಳಿಸಿತು.ಭಾರತದಲ್ಲಿ ಕ್ರಿಕೆಟ್​ ಶುರುವಾದಾಗಿನಿಂದ ಹಿಡಿದು, ಭಾರತ 1983ರಲ್ಲಿ ವಿಶ್ವಕಪ್​ ಗೆದ್ದಿದ್ದು, 2007 ಟಿ20 ವಿಶ್ವಕಪ್​​, 2011ರ ಏಕದಿನ ವಿಶ್ವಕಪ್​, ಆಸ್ಟ್ರೇಲಿಯಾ ನೆಲದಲ್ಲಿ ಬಾರ್ಡರ್​​ ಗವಾಸ್ಕರ್​​​ ಎತ್ತಿ ಹಿಡಿದವರೆಗೂ ಟೀಮ್​ ಇಂಡಿಯಾ ಮತ್ತು ಆಟಗಾರರ ಸಾಧನೆಗಳನ್ನು ಈ ಸಾಕ್ಷ್ಯ ಚಿತ್ರದಲ್ಲಿ ತೋರಿಸಲಾಯಿತು.
ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ತಮ್ಮ ಸಂಗೀತದ ಮಾಂತ್ರಿಕತೆಯಿಂದ ಪ್ರೇಕ್ಷಕರನ್ನು ಮನ ಸೆಳೆದರು. ಪ್ರತಿ ದಶಕಕ್ಕೂ ಒಂದೊಂದು ಹಾಡನ್ನು ಅರ್ಪಿಸಿದ ರೆಹಮಾನ್​ ನೇತೃತ್ವದ ತಂಡ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಪ್ರೇಕ್ಷರನ್ನ ರಂಜಿಸಿದರು.
6.30ಕ್ಕೆ ಆರಂಭಗೊಂಡ ಸಮಾರಂಭ ಸುಮಾರು 40 ನಿಮಿಷಗಳ ಕಾಲ ನಡೆಯಿತು. ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಜಾರ್ಖಂಡ್‌ನ ಪ್ರಸಿದ್ಧ ಚೌ ನೃತ್ಯ, ಕರ್ನಾಟಕದ ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಚಿಕ್ಕಬೋರಯ್ಯ, ಸಂತೆ ಕಲಸಗೆರೆ ಬಸವರಾಜು ನೇತೃತ್ವದ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.
ನಟ ಅಕ್ಷಯ್​ ಕುಮಾರ್​​​ ಸೇರಿ ಗಣ್ಯರು, ಸಿನಿ ತಾರೆಯರು ಐಪಿಎಲ್ ಫೈನಲ್​ ಕಾದಾಟಕ್ಕೂ ಮುನ್ನ ಈ ವರ್ಣ ರಂಜಿತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!