ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ವಿವಿದೆಡೆಯ ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದಾಳಿಯಲ್ಲಿ ಮೃತರಾದಂತ ಕುಟುಂಬಸ್ಥರಿಗೆ ಸರ್ಕಾರದಿಂದ 15 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ. ಕುಟುಂಬದ ವ್ಯಕ್ತಿಯೊಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡುವ ಚಿಂತನೆ ಕೂಡ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಹಾಸನದ ಹಳೇಬೀಡಿನ ಮಾಯಗೊಂಡನಹಳ್ಳಿ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಡಾನೆ ಸ್ಥಳಾಂತರ ಮಾಡುವುದಕ್ಕಾಗಿ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ. ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಬರಗಾಲದಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಪ್ರಾಣಿಗಳು ಹಿಂದಿರುಗಿಲ್ಲ. ಗುಂಪಿನಲ್ಲಿರುವ ಆನೆಗಳನ್ನು ಚದುರಿಸುವುದು ಕಷ್ಟ. ಆನೆಗಳು ಹೆಚ್ಚಾಗಿರುವ ಕಡೆ ನೂರಾರು ಸಿಬ್ಬಂದಿ ಸೇರಿ ಹಿಮ್ಮೆಟ್ಟಿಸಬೇಕು. ಅದಕ್ಕೆ ಬೇಕಾದಷ್ಟು ಹಣ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.
ಪ್ರಸಕ್ತ ವರ್ಷದ ಬಜೆಟ್ನಲ್ಲಿ ನೂರು ಕೋಟಿ ಹಣ ಮೀಸಲಿಟ್ಟಿದ್ದೇವೆ. ಬಂಡೀಪುರದಲ್ಲಿ ಹೊಸ ರೀತಿಯ ಫೆನ್ಸಿಂಗ್ ಟ್ರಯಲ್ ಮಾಡಿದ್ದೇವೆ. ಗುಂಪಿನಲ್ಲಿ ಇರೋ ಆನೆ ಚದುರಿಸೋದು ಕಷ್ಟ. ಆದರೂ ಈ ವರ್ಷ16 ಆನೆಗಳನ್ನ ಹಿಮ್ಮೆಟ್ಟಿಸಲಾಗಿದೆ. ನಿರಂತರವಾಗಿ ಕಾರ್ಯಾಚರಣೆ ನಡೆದಾಗ ನಿಯಂತ್ರಣ ಸಾದ್ಯ. ಹಾಗಾಗಿ ವಿಶೇಷ ಕಾರ್ಯಪಡೆ ಮಾಡಬೇಕೆಂದು ಮಾಡಿದ್ದೇವೆ. ಅದಕ್ಕಾಗಿ ಯೇ ವಿಶೇಷ ತಂಡ ಇರುತ್ತೆ, ತರಬೇತಿ ಕೊಡುತ್ತೇವೆ. ವಾಹನ ಎಲ್ಲ ಕೊಟ್ಟು ಕಂಟ್ರೋಲ್ ರೂಂಮ್ ಕೂಡ ಮಾಡುತ್ತೇವೆ ಎಂದು ತಿಳಿಸಿದರು.