ಹೊಸದಿಗಂತ ಡಿಜಿಟಲ್ ಡೆಸ್ಕ್ ಬಾಗಲಕೋಟೆ:
ಸಾಂಪ್ರದಾಯಿಕವಾಗಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವುದು ಸಾಮಾನ್ಯ. ಆದರೆ, ಸಾಕಿದ ಶ್ವಾನಕ್ಕೆ ಸೀಮಂತ ಕಾರ್ಯವನ್ನು ಮಾಡುವ ಮೂಲಕ ರಂಗಭೂಮಿ ಕಲಾವಿದೆ ಗಮನ ಸೆಳೆದಿದ್ದಾರೆ.
ಗುಳೇದಗುಡ್ಡದ ರಂಗಭೂಮಿ ಕಲಾವಿದೆ ಜ್ಯೋತಿ ಗುಳೇದಗುಡ್ಡ ಎಂಬುವವರು ತಮ್ಮ ಮನೆಯಲ್ಲಿ ಗರ್ಭಿಣಿಯಾಗಿದ್ದ ಸಾಕಿದ ಶ್ವಾನಕ್ಕೆ ಸೀರೆ, ಕುಂಕುಮ, ಅರಿಶಿಣ ಹಚ್ಚುವ ಮೂಲಕ ಗರ್ಭಿಣಿ ಶ್ವಾನಕ್ಕೆ ಸೀಮಂತ ಕಾರ್ಯ ಮಾಡಿದ್ದಾರೆ.
ಮಹಿಳೆಯರು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಏರ್ಪಡಿಸುವ ರೀತಿಯಲ್ಲಿಯೇ ಶ್ವಾನವನ್ನು ಸ್ವಚ್ಛವಾಗಿ ಸ್ನಾನ ಮಾಡಿಸಿದ ನಂತರ ಶ್ವಾನದ ಎರಡು ಕಾಲುಗಳಿಗೆ ಬಳೆ ಹಾಕಿ, ಮುಖಕ್ಕೆ ಅರಿಶಿಣ ಹಚ್ಚಿ, ಬಳಿಕ ಕುಂಕುಮ ಮತ್ತು ಸೀರೆ ತೊಡಿಸಿ ಪದಗಳನ್ನು ಹಾಡುವ ಮೂಲಕ ಗರ್ಭಿಣಿಯ ಶ್ವಾನದ ಬಯಕೆಯನ್ನು ಕಲಾವಿದೆ ಜ್ಯೋತಿಯವರು ಈಡೇರಿಸಿದ್ದಾರೆ.
ಸೀಮಂತ ಕಾರ್ಯವನ್ನು ಮಾಡುವಾಗ ಶ್ವಾನವು ಮನೆಯಲ್ಲಿ ಯಾವುದೇ ಗಲಾಟೆ ಮಾಡದೇ ತನಗೆ ಮಾಡುವ ಕಾರ್ಯವನ್ನು ಸಮಾಧಾನದಿಂದ ನೋಡುತ್ತಿತ್ತು. ಬಳೆ ಹಾಕುವಾಗ ಮತ್ತು ಮುಖಕ್ಕೆ ಅರಿಶಿಣ ಹಚ್ಚುವಾಗಲೂ ಕೂಡ ಶ್ವಾನವು ಅಲುಗಾಡಲಿಲ್ಲ.
ಮಹಿಳೆಯರಿಂದ ಆರತಿ :
ಮನೆಯಲ್ಲಿನ ಸಾಕು ಶ್ವಾನವು ಗರ್ಭಿಣಿಯಾಗಿದ್ದ ಸುದ್ದಿಯನ್ನು ಮನೆಯ ಪಕ್ಕದವರಿಗೆ ತಿಳಿಸಿರುವ ಕಲಾವಿದೆ ನಾಲ್ಕೈದು ಮುತ್ತೈದೆಯರನ್ನು ಕರೆಸಿ ಶ್ವಾನಕ್ಕೆ ಆರತಿ ಮಾಡಿದ ನಂತರ ಸಂಪ್ರದಾಯದಂತೆ ಸೀಮಂತ ಕಾರ್ಯ ಮಾಡಿದ್ದಾರೆ. ಜ್ಯೋತಿ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ