ಹೊಸದಿಗಂತ ವರದಿ, ಹುಬ್ಬಳ್ಳಿ:
ಹಿಂದೂ ಪದ ಅಶ್ಲೀಲ ಎಂಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ಪಕ್ಷ ತಳ್ಳಿ ಹಾಕುತ್ತದೆ. ಅವರು ಅವರ ವಯಕ್ತಿಕ ಅಭಿಪ್ರಾಯ. ಈ ಹೇಳಿಕೆ ಪಕ್ಷದ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೇಳಿಕೆ ಬಗ್ಗೆ ಸತೀಶ ಅವರಿಂದ ಸ್ಪಷ್ಟೀಕರಣ ಪಡೆಯಲಾಗುತ್ತದೆ. ನಾನು ಕೂಡಾ ಒಬ್ಬ ಹಿಂದೂ. ನಮಗೆ ನಮ್ಮದೇ ಆದ ಇತಿಹಾಸವಿದೆ. ಹಾಗಾಗಿ ಸತೀಶ್ ಹೇಳಿಕೆ ಅವರ ವಯಕ್ತಿಕ ವಿಚಾರವಾಗಿದೆ. ಜಾರಕಿಹೊಳಿ ಇಂತಹ ವಿಚಾರಗಳನ್ನು ತಮ್ಮ ಮನೆಯಲ್ಲಿ ಮಾತನಾಡಿದರೇ ಏನೂ ಆಗುವುದಿಲ್ಲ. ಆದರೆ ಸಾರ್ವಜನಿಕ ಬದುಕಿನಲ್ಲಿ ಈ ತರಹ ಹೇಳಿಕೆ ನೀಡುವುದನ್ನು ಪಕ್ಷ ಖಂಡಿಸುತ್ತದೆ ಎಂದರು.
ಭಾರತ ಜೋಡೋ ಯಾತ್ರೆಯಿಂದ ಬಿಜೆಪಿಗೆ ಭಯ ಬಂದಿದೆ. ಈ ಹಿಂದೆ ಗಾಂಧೀಜಿ ಭಾರತ ಚೋಡೋ ಯಾತ್ರೆ ಮಾಡಿದ್ದರು. ಆದರೆ ಮೋದಿ ಭಾರತ ತೋಡೋ ಮಾಡಿದ್ದಾರೆ. ಈಗ ರಾಹುಲ್ ಗಾಂಧಿ ಭಾರತ ಜೋಡೋ ಮಾಡುತ್ತಿದ್ದಾರೆ. ಇದೇ ನಮಗೂ ಅವರಿಗೆ ಇರುವ ವ್ಯತ್ಯಾಸ. ಇದನ್ನು ಸಹಿಸಲು ಆಗದೇ ಬಿಜೆಪಿಯವರು ಭಾರತ ಜೋಡೋ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಬೀದಿ ಬದಿ ವ್ಯಾಪಾರಸ್ಥರಿಂದ ಹಣ ಪಡೆದಿರುವ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಮಾಡಿದ ಅವರು, ಬಿಜೆಪಿ ಸರ್ಕಾರ ನಿಂತಿರುವುದೇ ಕಮಿಷನ್ ನಿಂದ. ಇದು ಲಂಚದ ಸರ್ಕಾರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಉತ್ತರ ಕೊಡಬೇಕು. ಬೀದಿ ಬದಿ ವ್ಯಾಪರಿಗಳಿಂದಲೂ ಹಣ ಪಡೆಯುತ್ತಾರೆಂದರೇ ಬಿಜೆಪಿ ಪರಿಸ್ಥಿತಿ ಎಲ್ಲಿದೆ ಬಂದಿದೆ ಎಂಬುದಕ್ಕೆ ಇದು ಉದಾಹರಣೆ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ