ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಕಾಂಗ್ರೆಸ್ ನಾಯಕರಿಗೊಂದು, ಜನಸಾಮಾನ್ಯರಿಗೆ ಒಂದು ಅಂತ ಕಾನೂನು ಇದೆಯಾ? ಎಂದು ರಾಹುಲ್ ಗಾಂಧಿ ಇಡಿ ತನಿಖೆ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಉಡುಪಿಯ ಓಶಿಯನ್ ಪರ್ಲ್ ಹೋಟೆಲಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕೋರ್ಟ್ ವಿಚಾರಣೆಗೆ ಕರೆದರೆ ಹೋಗಿ ಹೇಳಿಕೆ ಕೊಡಬೇಕು. ನಿರಪರಾಧಿಯಾದರೇ ಹೊರಬರುತ್ತಾರೆ, ಅಪರಾಧಿಗಳಾದರೆ ಶಿಕ್ಷೆ ಅನುಭವಿಸುತ್ತಾರೆ. ಇವರಿಗೆ ಈ ನೆಲದ ಕಾನೂನು ಅನ್ವಯಿಸುವುದಿಲ್ಲವೇ? ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಡ್ಡಮಾರ್ಗ ಹಿಡಿದ ಕಾಂಗ್ರೆಸ್ ನಾಪತ್ತೆಯಾಗುತ್ತಿದೆ ಎಂದರು
ಕರಾವಳಿಯ ಮೀನುಗಾರ ಮುಖಂಡ ಯಶ್ಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲ ತಾಣದಲ್ಲಿ ಬೆದರಿಕೆ ಬಂದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸರು ನಿಗಾ ಇರಿಸಿದ್ದಾರೆ. ತನಿಖೆ ನಡೆಯುತ್ತಿದೆ.
ಪಿ.ಎಫ್.ಐ ನಂತಹ ಮತಾಂಧ ಶಕ್ತಿಗಳು ನಮ್ಮ ನಡುವೆ ಇದ್ದಾವೆ. ಹಿಜಾಬ್ ನಿಂದ ಆರಂಭಿಸಿ ಏನೆಲ್ಲಾ ಮಾಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಸೂಕ್ತ ಸಮಯ ಬಂದಾಗ ನಿಷೇಧ ಮಾಡುತ್ತೇವೆ. ಕೇಂದ್ರಕ್ಕೆ ರಾಜ್ಯದಲ್ಲಿ ಪಿ.ಎಫ್.ಐ ಚಟುವಟಿಕೆಗಳ ಬಗ್ಗೆ ವರದಿ ಕಳುಹಿಸುತ್ತಿದ್ದೇವೆ ಎಂದರು.