ಹೊಸದಿಗಂತ ವರದಿ, ಬಳ್ಳಾರಿ:
ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ, ಯುವ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ.ನಾಗೇಂದ್ರ ಅವರ ಪರ ನಗರದಲ್ಲಿ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ನೆರೆದ ಸಾವಿರಾರನ್ನು ಕೈ ಬೀಸುತ್ತಾ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ನಗರದ ಬೆಳಗಲ್ ಕ್ರಾಸ್ ನಿಂದ ಪ್ರಾರಂಭವಾದ ರೋಡ್ ಶೋ, ಬೆಳಗಲ್ಲು ರಸ್ತೆ, ಕೌಲ್ ಬಜಾರ್ ಪ್ರದೇಶ ಸೇರಿದಂತೆ ನಾನಾಕಡೆ ವಿಜೃಂಭಣೆಯಿಂದ ನಡೆಯಿತು. ದಾರಿ ಉದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ರಾಹುಲ್ ಗಾಂಧಿ ಅವರಿಗೆ ಹೂ ಮಳೆ ಸುರಿಸಿದರು. ಅಭಿಮಾನಿಗಳು ಅತ್ಯಂತ ಉತ್ಸಾಹದಿಂದ ರಾಹುಲ್ ಗಾಂಧಿವರನ್ನು ಸ್ವಾಗತಿಸಿದರು. ಈ ವೇಳೆ ರಾಹುಲ್ ಗಾಂಧಿ ಅವರ ಪರ ಘೋಷಣೆಗಳು ಮೊಳಗಿದವು. ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ.ನಾಗೇಂದ್ರ ಅವರಿಬ್ಬರು ರಾಹುಲ್ ಗಾಂಧಿ ಅವರ ಜೊತೆಗೂಡಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ನೆರೆದ ಜನರನ್ನು ಕೈಮುಗಿದು ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಸೇರಿದಂತೆ ಪಕ್ಷದ ವಿವಿಧ ಮುಖಂಡರು ರಾಹುಲ್ ಅವರೊಂದಿಗಿದ್ದರು.