ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರದಲ್ಲಿ ಮುಂದುವರೆದಿದೆ. ಇಂದು ಬೆಳಗ್ಗೆ 6 ಗಂಟೆಗೆ ಪತೂರ್ನ ಅಕೋಲಾದಿಂದ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಲಾಯಿತು. ಈ ಜಾಥಾದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.ಕನ್ಯಾಕುಮಾರಿಯಿಂದ ಇಲ್ಲಿಯವರೆಗೆ ರಾಹುಲ್ ಪ್ರಯಾಣ 70 ದಿನಗಳನ್ನು ಪೂರೈಸಿದೆ.
ಇದುವರೆಗೆ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿದಂತೆ ಆರು ರಾಜ್ಯಗಳ 29 ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಕೈಗೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಪಾದಯಾತ್ರೆ ಇದೇ ತಿಂಗಳ 20ರಂದು ಮಹಾರಾಷ್ಟ್ರದಿಂದ ಮಧ್ಯಪ್ರದೇಶ ಪ್ರವೇಶಿಸಲಿದೆ. 2024ರ ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಲೇ ರಾಹುಲ್ ಗಾಂಧಿ ಈ ಪ್ರವಾಸ ಮಾಡುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಆದರೆ ದೇಶದ ಜನರನ್ನು ಒಗ್ಗೂಡಿಸಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಭಾರತ್ ಜೋಡೋ ಯಾತ್ರಾ ರಾಜಸ್ಥಾನದ ಉಸ್ತುವಾರಿ, ಕಾಂಗ್ರೆಸ್ ನಾಯಕ ವಿಭಾಕರ್ ಶಾಸ್ತ್ರಿ ಅವರು 2024 ರ ಲೋಕಸಭಾ ಚುನಾವಣೆಯ ಮೊದಲು ಭಾರತದ ಪೂರ್ವದಿಂದ ಪಶ್ಚಿಮ ಭಾಗಗಳಿಗೆ ಮತ್ತೊಮ್ಮೆ ಈ ರೀತಿಯ ಯಾತ್ರೆಯನ್ನು ಕೈಗೊಳ್ಳುತ್ತೇವೆ ಎಂದು ಈಗಾಗಲೇ ಹೇಳಿದ್ದಾರೆ.