ಹೊಸದಿಗಂತ ಡಿಜಿಟಲ್ ಡೆಸ್ಕ್
ಎಸ್ಸಿ/ಎಸ್ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಏನೂ ಮಾಡಿಲ್ಲ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಹುಟ್ಟುಹಾಕಿರುವ ಅಭಿವೃದ್ಧಿ ಸುನಾಮಿಯಲ್ಲಿ ಕಾಂಗ್ರೆಸ್ ಕಣ್ಮರೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, “ಕಾಂಗ್ರೆಸ್ ಪಕ್ಷವು 60 ವರ್ಷಗಳ ಕಾಲ ಆಡಳಿತ ನಡೆಸಿತು. ಅದು ಕೇವಲ ಎಸ್ಸಿ/ಎಸ್ಟಿ ಸಮುದಾಯಗಳ ಕಲ್ಯಾಣದ ಬಗ್ಗೆ ಮಾತನಾಡಿದೆ ಆದರೆ ಅವರ ಬಡತನವನ್ನು ಎಂದಿಗೂ ನಿವಾರಿಸಲಿಲ್ಲ. ಅವರು ಸಮುದಾಯವನ್ನು ತಮ್ಮ ಮತಬ್ಯಾಂಕ್ ಆಗಿ ಬಳಸಿಕೊಂಡರು. ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆ ಸುನಾಮಿ ಸೃಷ್ಟಿಸಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾದ ಸುನಾಮಿ ಹುಟ್ಟುಹಾಕಿರುವುದು ಬಿಜೆಪಿ. ನಮ್ಮ ಸರ್ಕಾರವು ಎಸ್ಸಿ/ಎಸ್ಟಿ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಘನತೆ ಮತ್ತು ಸ್ವಾಭಿಮಾನದಿಂದ ಬದುಕಲು ನಿಜವಾಗಿ ಶ್ರಮಿಸುತ್ತಿದೆ. ಇದೀಗ ಬದಲಾವಣೆಯ ಸಮಯ ಬಂದಿದೆ” ಎಂದು ಅವರು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಗೆದ್ದಿದ್ದ ಸೋನಿಯಾ ಗಾಂಧಿ ₹ 3000 ಕೋಟಿ ಪ್ಯಾಕೇಜ್ ಭರವಸೆ ನೀಡಿ ಮೂರು ಪೈಸೆ ನೀಡದೆ ಬಳ್ಳಾರಿ ಜನತೆಗೆ ಮೋಸ ಮಾಡಿದ್ದಾರೆ.ಬಳ್ಳಾರಿ ಮತದಾರರು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿಯ ಸುನಾಮಿಯಲ್ಲಿ ದೇಶದ ಪುರಾತನ ಪಕ್ಷ ಸಂಫೂರ್ಣ ಕಣ್ಮರೆಯಾಗಲಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳಿಗೆ ₹ 8000 ಮತ್ತು ₹ 15000 ಕೋಟಿ ಮೀಸಲಿಟ್ಟಿರುವುದಾಗಿ ಹೇಳಿಕೊಂಡಿತ್ತು ಆದರೆ ನಿಜವಾಗಿ ನ್ಯಾಯ ನೀಡಲಿಲ್ಲ ”ಎಂದು ಅವರು ವಾಗ್ದಾಳಿ ನಡೆಸಿದರು.
ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮೀಸಲಾತಿಯನ್ನು ಹೆಚ್ಚಿಸುವ ಐತಿಹಾಸಿಕ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಪರಿಶಿಷ್ಟ ಜಾತಿಯ (ಎಸ್ಸಿ) ಕೋಟಾವನ್ನು ಶೇಕಡಾ 15 ರಿಂದ ಶೇಕಡಾ 17 ಕ್ಕೆ ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) ಕೋಟಾವನ್ನು ಶೇಕಡಾ 3 ರಿಂದ ಶೇಕಡಾ 7 ಕ್ಕೆ ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಎಸ್ಸಿ/ಎಸ್ಟಿ ಸಮುದಾಯಗಳಿಗೆ ಸರ್ಕಾರ ₹ 28000 ಕೋಟಿ ಅನುದಾನ ನೀಡಿದೆ. ಸಮಾಜ ಕಲ್ಯಾಣ ಇಲಾಖೆಯ ಹಲವಾರು ಯೋಜನೆಗಳಿಗೆ ₹ 6000 ಕೋಟಿ ನೀಡಲಾಗಿದೆ. ಎಸ್ಟಿ ಸಮುದಾಯಕ್ಕೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಲಾಗಿದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ನ್ಯಾಯ ಒದಗಿಸಿದ್ದಾರೆ. ಹಾಲುಮತ ಸಮುದಾಯ, ಕಾಗಿನೆಲೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದು, ವಾಲ್ಮೀಕಿ ಜಯಂತಿ ಆಚರಣೆ ಘೋಷಣೆ ಮಾಡಿದ್ದು, 100 ಅಂಬೇಡ್ಕರ್ ವಸತಿ ನಿಲಯಗಳು, 50 ಕನಕದಾಸ ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ,’’ ಎಂದರು.