ಹೊಸದಿಗಂತ ವರದಿ,ಮಂಗಳೂರು:
ರಾಜ್ಯದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಮಾಡುತ್ತಿದೆ. ಇದು ಜನರನ್ನು ದಾರಿತಪ್ಪಿಸುವ ಮತ್ತು ಅಪಾಯಕ್ಕೀಡುಮಾಡುವ ಪ್ರಯತ್ನವಾಗಿದೆ. ಕಾಂಗ್ರೆಸ್ ಈ ರೀತಿಯ ಹೀನ ರಾಜಕಾರಣವನ್ನು ನಿಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಭೀತಿ ಹುಟ್ಟಿಸುತ್ತಿರುವ ಈ ಅವಧಿಯಲ್ಲಿ ಅದನ್ನು ಎಲ್ಲರೂ ಒಂದಾಗಿ ಎದುರಿಸಬೇಕಿದೆ. ಕಾಂಗ್ರೆಸ್ಗೆ ಅದುಬೇಕಿಲ್ಲ. ಪಾದಯಾತ್ರೆಯ ಮೂಲಕ ಕೊರೋನಾ ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದರು.
ಜನರನ್ನು ದಾರಿತಪ್ಪಿಸುವ ಪ್ರಯತ್ನನ್ನು ಕಾಂಗ್ರೆಸ್ ಮುಂದುವರಿಸುತ್ತಲೇ ಇದೆ. ಈಗ ಮೇಕೆದಾಟು ರಾಜಕಾರಣ ನಡೆಯುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಮೇಕೆದಾಟು ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ತಯಾರಿಯೂ ಮಾಡಿರಲಿಲ್ಲ. ಪ್ರಸಕ್ತ ಬಿಜೆಪಿ ಸಂಪೂರ್ಣ ಬದ್ಧತೆಯಿಂದ ಕಾರ್ಯವನ್ನು ಕೈಗೆತ್ತಿಕೊಂಡಿದೆ. ನಾವು ಮಾಡಿಯೇ ಮಾಡುತ್ತೇವೆ. ಅದಕ್ಕೆ ಕಾಂಗ್ರೆಸ್ನ ಪಾದಯಾತ್ರೆಯ ಅಗತ್ಯವೇ ಇಲ್ಲ ಎಂದು ನಳಿನ್ ಹೇಳಿದರು.