ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಸೇಡಿನ ರಾಜಕಾರಣವನ್ನು ಆರಂಭಿಸಿದ್ದು, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಪ್ರತಿಪಕ್ಷ ನಾಯಕರ ಮೇಲೆ ಪೊಲೀಸ್ ಬಲ ಪ್ರಯೋಗಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ರಂಗನಾಥ ದೇಗುಲ ಹಾಗೂ ಹರದನಹಳ್ಳಿಯ ದೇವೇಶ್ವರ ಸ್ವಾಮಿದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಟಿ ರವಿ ಪ್ರಕರಣ ಬೇಧಿಸುವ ಭರದಲ್ಲಿ ಪೊಲೀಸರು ನೊಂದವರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಕಾನೂನನ್ನು ಗಾಳಿಗೆ ತೂರಿದ್ದಾರೆಂದು ಕಿಡಿಕಾರಿದರು.
ಕೆಲವು ಪೊಲೀಸ್ ಅಧಿಕಾರಿಗಳ ಇಟ್ಟುಕೊಂಡು ವಿರೋಧಿಗಳನ್ನು ದಮನ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಜನಪ್ರತಿನಿಧಿಯಾಗಿರುವ ಸಿ.ಟಿ.ರವಿ ಅವರನ್ನು ರಾತ್ರಿಯೆಲ್ಲಾ ಸುತ್ತಿಸಬೇಕಿತ್ತಾ? ಬಂಧಿಸುವುದಿದ್ದರೆ ನೇರವಾಗಿ ಬೆಂಗಳೂರಿನ ಜನಪ್ರತಿನಿಧಿ ಕೋರ್ಟಿಗೆ ಕರೆದುಕೊಂಡು ಬರಬಹುದಿತ್ತು. ಬಿಜೆಪಿ ಸ್ನೇಹಿತರು ಸರಿಯಾದ ರೀತಿ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡಿದರೆ ಅಧಿಕಾರಿಗಳೆಲ್ಲಾ ಸಸ್ಪೆಂಡ್ ಆಗ್ತಾರೆ ಎಂದು ಹೇಳಿದರು.