ಹೊಸ ದಿಗಂತ ವರದಿ,ಕಲಬುರಗಿ:
ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಕರ್ನಾಟಕದ ಭಕ್ತರು ಮತ್ತು ಅಲ್ಲಿನ ವ್ಯಾಪಾರಿಗಳ ನಡುವೆ ಜಗಳವಾಗಿದ್ದು, ಇದರಿಂದಾಗಿ ಶ್ರೀಶೈಲದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ವ್ಯಾಪಾರಿಯೊಬ್ಬರ ಹಲ್ಲೆ ಮಾಡಿದ್ದರಿಂದ ಘಟನೆಯಲ್ಲಿ ಬೀಳಗಿ ತಾಲ್ಲೂಕಿನ ಜಾನಮಟ್ಟಿ ನಿವಾಸಿ ಶ್ರೀಶೈಲ ವಾರಿಮಠ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ ? ಖಚಿತಪಟ್ಟಿಲ್ಲ ?.
ನಿಗದಿತ (ಎಂಆರ್ಪಿ) ದರಕ್ಕಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರಾಟ ಮಾಡುತ್ತಿರುವುದನ್ನು ಕರ್ನಾಟಕದ ಯಾತ್ರಿಗಳು ಪ್ರಶ್ನಿಸಿದ್ದಾರೆ. ಇದೇ ಕಾರಣಕ್ಕೆ ಗಲಾಟೆ ನಡೆದಿದೆ. ಈ ವೇಳೆ ವ್ಯಾಪಾರಿಯೊಬ್ಬರು ಎಳನೀರು ಕೊಚ್ಚುವ ಮಚ್ಚಿನಿಂದ ಕರ್ನಾಟಕದ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಕರ್ನಾಟಕದಿಂದ ಬಂದಿದ್ದ ಯಾತ್ರಾರ್ಥಿಗಳು ಪ್ರತಿಭಟನೆ ನಡೆಸಿದರು.
ಘರ್ಷಣೆಯಲ್ಲಿ ಕರ್ನಾಟಕದಿಂದ ತೆರಳಿದ್ದ 200ಕ್ಕೂ ಹೆಚ್ಚು ವಾಹನಗಳನ್ನು ಧ್ವಂಸ ಮಾಡಲಾಗಿದೆ. ಪೊಲೀಸ್ ಬ್ಯಾರಿಕೇಡ್ಗೆ ಬೆಂಕಿ ಹಚ್ಚಲಾಗಿದೆ. ಕರ್ನಾಟಕದ ಧ್ವಜವನ್ನು ಸುಟ್ಟು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಈ ವೇಳೆ ಸ್ಥಳೀಯ ಅಂಗಡಿಗಳ ಮೇಲೂ ದಾಳಿ ನಡೆದಿದೆ. ಘಟನೆಯಿಂದಾಗಿ ಶ್ರೀಶೈಲದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.