ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಂಚಮಸಾಲಿ 2ಎ ಮೀಸಲಾತಿ ವಿಚಾರದ ಬಗ್ಗೆ ಪಾರ್ಟಿಯಲ್ಲಿ ಚರ್ಚೆ ಮಾಡುತ್ತೇವೆ. ಆ ಸಮುದಾಯದವರು ಬಂದು ನಮ್ಮನ್ನು ಭೇಟಿಯಾಗುವುದರ ಜೊತೆಗೆ ಒಕ್ಕಲಿಗರು ಮೀಸಲಾತಿ ಕೇಳಿದ್ದಾರೆ. ಈ ಬಗ್ಗೆ ಸರ್ಕಾರ ಆದಷ್ಟು ಬೇಗ ಸ್ಪಷ್ಟಪಡಿಸಲಿ. ಸಮಾಜದ ಹಿಂದುಳಿದ ವರ್ಗಗಳಿಗೆಲ್ಲಾ ನ್ಯಾಯ ಸಿಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಂದು ಪಂಚಮಸಾಲಿ ಸಮಾವೇಶ ನಡೆಯಲಿದೆ. ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಕೆಲವೊಂದು ಆದೇಶವನ್ನು ನೀಡಿದೆ. ಆದರೆ ಇದೆಲ್ಲವನ್ನೂ ಮೀರಿ ರಾಜ್ಯ ಸರ್ಕಾರ ಜನರಿಗೆ ಸುಳ್ಳು ಭರವಸೆಯ ಚಾಕಲೇಟ್ ನೀಡುತ್ತಿದೆ ಎಂದರು.
ಕೋವಿಡ್ ನೆಪವಿಟ್ಟುಕೊಂಡು ಚುನಾವಣೆ ಮುಂದೂಡುವ ಯತ್ನವನ್ನು ಸರ್ಕಾರ ನಡೆಸುತ್ತಿದೆ. ಈ ಹಿಂದೆ ನಾವು ಮೇಕೆದಾಟು ಯಾತ್ರೆ ಮಾಡಿದಾಗಲೂ ಕೋವಿಡ್ ನೆಪದಲ್ಲಿ ನಮ್ಮ ವಿರುದ್ಧ ನಾಲ್ಕೈದು ಪ್ರಕರಣವನ್ನು ದಾಖಲಿಸಿದ್ದರು. ಈಗ ರಾಹುಲ್ಗಾಂಧಿ ಜೊಡೋ ಯಾತ್ರೆಗೆ ಜನ ಸೇರುವುದನ್ನು ತಪ್ಪಿಸಲು ಪ್ರಕರಣ ದಾಖಲಿಸುವ ಹುನ್ನಾರ ಮಾಡಿದ್ದಾರೆ. ಕೋವಿಡ್ ವಿಷಯದಲ್ಲಿ ವೈಜ್ಞಾನಿಕವಾಗಿ ಯಾವುದೇ ಮಾಹಿತಿ ಇಲ್ಲ. ಆದರೆ ಪ್ರತಿಪಕ್ಷಗಳ ಜನಪ್ರಿಯ ಕಾರ್ಯಕ್ರಮಗಳನ್ನು ಹತ್ತಿಕ್ಕಲು ಬಿಜೆಪಿಗರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.