ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತದಲ್ಲಿ ಇಲ್ಲಿಯವರೆಗೆ 1.84 ಕೋಟಿ ಡೋಸ್ ಕೋವಿಡ್-19 ಲಸಿಕೆ ಪ್ರಮಾಣವನ್ನು ಜನರಿಗೆ ನೀಡಲಾಗಿದ್ದು, 23 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು.
ಶನಿವಾರ ಪರಿಸರ ಆರೋಗ್ಯದ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಹೊಸ ಹಸಿರು ಕ್ಯಾಂಪಸ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಇನ್ನು ಆರಕ್ಕೂ ಹೆಚ್ಚು ಕೊರೋನಾ ವೈರಸ್ ಲಸಿಕೆಗಳು ಬರಲಿವೆ ಎಂದು ಹೇಳಿದರು.
ಭಾರತವು ಈಗ ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ, ಇನ್ನು ಅರ್ಧ ಡಜನ್ಗಿಂತಲೂ ಹೆಚ್ಚು ಲಸಿಕೆಗಳು ಬರಲಿವೆ. ಈಗ ಅಭಿವೃದ್ಧಿಪಡಿಸಿದ ಲಸಿಕೆಗಳನ್ನು 71 ದೇಶಗಳಿಗೆ ನೀಡಲಾಗಿದೆ. ಇನ್ನೂ ಅನೇಕ ರಾಷ್ಟ್ರಗಳು ಲಸಿಕೆಗಳನ್ನು ಬಯಸುತ್ತಿವೆ . ಕೆನಡಾ, ಬ್ರೆಜಿಲ್ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳು ಭಾರತೀಯ ಲಸಿಕೆಗಳನ್ನು ಬಹಳ ಉತ್ಸಾಹದಿಂದ ಬಳಸುತ್ತಿವೆ ಎಂದು ಹೇಳಿದರು.
‘ವಿಜ್ಞಾನವನ್ನು ಗೌರವಿಸಿ. ಲಸಿಕೆ ಮೇಲಿನ ರಾಜಕೀಯವನ್ನು ಕೊನೆಗೊಳಿಸುವ ಅವಶ್ಯಕತೆಯಿದೆ.ಇದು ವೈಜ್ಞಾನಿಕ ಹೋರಾಟವೇ ಹೊರತು, ರಾಜಕೀಯವಲ್ಲ. ಅದಕ್ಕಾಗಿಯೇ ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’. ‘ನಮ್ಮ ವಿಜ್ಞಾನಿಗಳ ಪ್ರಯತ್ನಗಳು ಪ್ರಶಂಸನೀಯವಾಗಿದ್ದು, ಅವರ ಶ್ರಮದಿಂದಾಗಿ ನಾವು ಈ ಎಲ್ಲವನ್ನು ಸಾಧಿಸಿದ್ದೇವೆ. 2020ನೇ ವರ್ಷವನ್ನು ಕೋವಿಡ್-19 ವರ್ಷವಲ್ಲದೆ, ವಿಜ್ಞಾನ ಮತ್ತು ವಿಜ್ಞಾನಿಗಳ ವರ್ಷವೆಂದು ನೆನಪಿಸಿಕೊಳ್ಳಲಾಗುವುದು. ಕೋವಿಡ್-19 ಪರೀಕ್ಷೆಗೆ ಆರಂಭದಲ್ಲಿ ಭಾರತದಲ್ಲಿ ಕೇವಲ ಒಂದು ಪ್ರಯೋಗಾಲಯವಿತ್ತು. ಆದರೆ ನಮ್ಮಲ್ಲಿ ಈಗ 2,412 ಪರೀಕ್ಷಾ ಕೇಂದ್ರಗಳಿವೆ’ ಎಂದು ತಿಳಿಸಿದರು.
ಕೊರೋನಾ ವೈರಸ್ ಅನ್ನು ಐಸೋಲೇಷನ್ ಮಾಡಿದ ವಿಶ್ವದ ಮೊದಲಿಗರು ನಾವು. ಅದರ ರೂಪಾಂತರವನ್ನು ಪ್ರತ್ಯೇಕಿಸಿದ್ದೇವೆ. ಮತ್ತು ನಮ್ಮ ವಿಜ್ಞಾನಿಗಳು ಲಸಿಕೆಯಲ್ಲಿ ಐಸಿಎಂಆರ್ಗೆ ಸಹಾಯ ಮಾಡಿದರು. ಜನರು ಈ ಕೆಲಸವನ್ನು ಹೊಗಳಿದ್ದಾರೆ. ಕೆಲವರು ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸಿದರು, ಆದರೆ ಕೊನೆಗೂ ಸತ್ಯವು ಗೆಲುವು ಸಾಧಿಸಿದೆ ಎಂದರು.
ಪ್ರಸುತ್ತ ಸೋಂಕು ಪ್ರಕರಣಗಳ ಹೆಚ್ಚುತ್ತಿದೆ, ಈ ಗೊಂದಲದ ಪ್ರವೃತ್ತಿ ಅಜಾಗರೂಕತೆ ಮತ್ತು ತಪ್ಪು ತಿಳುವಳಿಕೆಯಿಂದಾಗಿದೆ. ಲಸಿಕೆ ಬಂದಿರುವುದರಿಂದ ಈಗ ಎಲ್ಲವೂ ಚೆನ್ನಾಗಿವೆ ಎಂದು ಜನರು ಭಾವಿಸುತ್ತಾರೆ. ಆದ್ರೆ ವೈರಸ್ ವಿರುದ್ಧದ ರಕ್ಷಣೆಗಾಗಿ ಕೋವಿಡ್-19 ನಿಯಮಗಳನ್ನು ಪಾಲಿಸುವುದು ಅನಿವಾರ್ಯ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಒತ್ತಾಯಿಸಿದರು.