ಹೊಸ ದಿಗಂತ ವರದಿ, ರಾಮನಗರ:
ಕನಕಪುರ ತಾಲ್ಲೂಕಿನಾದ್ಯಂತ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು, ಅವರ ಬ್ಯಾಂಕ್ ಖಾತೆಗಳಲ್ಲಿದ್ದ 84.57 ಲಕ್ಷ ರೂಪಾಯಿ ಹಣವನ್ನು ತಾತ್ಕಾಲಿಕವಾಗಿ ( ಫ್ರೀಜಿಂಗ್) ಬಳಕೆ ಸ್ಥಗಿತಗೊಳಿಸಿದ್ದಾರೆ.
ಪ್ರಕರಣ ಸಂಬಂಧ ರಾಮನಗರ ಸೈಬರ್ ಠಾಣೆ ಪೊಲೀಸರು ಕನಕಪುರ ಟೌನ್ ನ ಪ್ರದೀಪ್ ( 36) ಎಂಬುವರನ್ನು ಬಂಧಿಸಿದ್ದು, ಉಳಿದ ಎಂಟು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಆರೋಪಿಗಳು ಫೋನ್ ಮೂಲಕ ಹಾಗೂ ವಿವಿಧ ಬೆಟ್ಟಿಂಗ್ ಆಯಪ್ ಗಳ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು. ಬ್ಯಾಂಕ್ ಖಾತೆಗಳಿಗೆ ಬೆಟ್ಟಿಂಗ್ ಹಣ ಸಂದಾಯ ಆಗುತಿತ್ತು ಎನ್ನಲಾಗಿದೆ.
ಬಂಧಿತನಿಂದ ಮೂರು ಮೊಬೈಲ್ ಹಾಗೂ 15 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ರಾಮನಗರ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.