ದಿಗಂತ ವರದಿ ವಿಜಯಪುರ:
ಸ್ಟೇಷನರಿ ವಸ್ತುಗಳ ಖರೀದಿಗೆ ಹೋಗಿದ್ದ ವೇಳೆ ಅಂಗಡಿಯವರೊಂದಿಗೆ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟನಲ್ಲಿ ಬುಧವಾರ ಸಂಜೆ ನಡೆದಿದೆ.
ಗಾಯಕವಾಡ್ ಹಾಗೂ ಅವರ ಸ್ನೇಹಿತೆ ಇಬ್ಬರೂ ಉಮದಿ ಸೂಪರ್ ಮಾರ್ಕೆಟ್ ನಲ್ಲಿ ಕಾಸ್ಮೆಟಿಕ್ ವಸ್ತು ಖರೀದಿಗೆ ಹೋಗಿದ್ದ ವೇಳೆ ಗಲಾಟೆ ಮಾಡಿಕೊಂಡಿದ್ದು, ಕಾಸ್ಮೆಟಿಕ್ ವಸ್ತುಗಳ ಪರಿಶೀಲನೆ ವೇಳೆ ಸೂಪರ್ ಮಾರ್ಕೆಟ್ ಸಿಬ್ಬಂದಿಗೂ ರಾಜೇಶ್ವರಿಗೂ ವಾಗ್ವಾದ ಆಗಿದೆ. ಬಳಿಕ 8 ರಿಂದ 10 ಗೂಂಡಾಗಳನ್ನು ಕರೆಯಿಸಿ ಸೂಪರ್ ಮಾರ್ಕೆಟ್ ಮಾಲೀಕ ಮಲ್ಲಿಕಾರ್ಜುನ್ ಉಮದಿ ಹಾಗೂ ಅವರ ಪುತ್ರ ಪ್ರಶಾಂತ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಗಲಾಟೆಯಾಗಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.