ಹೊಸ ದಿಗಂತ ವರದಿ, ಮಡಿಕೇರಿ :
ಮಳೆಯ ಪ್ರಮಾಣ ಆಧರಿಸಿ ಬೆಳೆ ಸರ್ವೆ ಮಾಡಬೇಕು. ಆ ಮೂಲಕ ಬೆಳೆಗಾರರು ಹಾಗೂ ರೈತರಿಗೆ ಇನ್ಪುಟ್ ಸಬ್ಸಿಡಿ ಪರಿಹಾರಗಳು ಒದಗಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದ್ದಾರೆ.
ಬೆಳೆ ಹಾನಿಗೆ ಸಂಬಂಧಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ತಾಲೂಕು ಹಾಗೂ ಜಿ.ಪಂ.ವ್ಯಾಪ್ತಿಗಳಲ್ಲಿ ಬಿದ್ದ ಮಳೆಯನ್ನಾಧರಿಸಿ, ಬೆಳೆ ಹಾನಿ ಸರ್ವೆ ಮಾಡಬೇಕು. ಕಳೆದ ಮೂರು ವರ್ಷಗಳಲ್ಲಿ ಮಾಡಿದ ಸರ್ವೆಗಳಂತೆ ಈ ವರ್ಷವೂ ಸಹ ನಿಖರ ಸರ್ವೆ ಮಾಡಬೇಕು ಎಂದು ಅವರು ತಿಳಿಸಿದರು.
ಹೋಬಳಿ ಮಟ್ಟದಲ್ಲಿ ಬೆಳೆ ಹಾನಿ ಕುರಿತು ವಿಮರ್ಶೆ ಮಾಡಬೇಕು. ಅಗಸ್ಟ್ ತಿಂಗಳಿನವರೆಗಿನ ಪೂರ್ಣಗೊಂಡ ವರದಿಗಳನ್ನು ಸಲ್ಲಿಸಿ, 25 ದಿನಗಳ ಹಿಂದೆ ಬಿದ್ದ ಮಳೆಯನ್ನು ಆಧರಿಸಿ ಹಾಗೂ ಅಧಿಕ ಮಳೆ ಬಿದ್ದ ಪ್ರದೇಶಗಳಲ್ಲಿ ಪುನಃ ಮರು ಸರ್ವೆ ನಡೆಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಹೆಚ್ಚು ಮಳೆಯಾದ ಪ್ರದೇಶದಲ್ಲಿ ಬೆಳೆ ಹಾನಿ ದುರಸ್ತಿ ಕುರಿತು ಮಾಹಿತಿ ನೀಡಬೇಕು ಹಾಗೂ ಕ್ಷೇತ್ರ ಭೇಟಿ ಮಾಡಿದ ವರದಿ ಹಾಗೂ ಛಾಯಾಚಿತ್ರ ಸಲ್ಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
2021 ರಲ್ಲಿ ಎಲ್ಲಾ ಗ್ರಾಮಗಳಲ್ಲೂ ಮಾದರಿ ಸರ್ವೆ ಮಾಡಲಾಗಿದೆ. ಈವರೆಗೆ ಶೇ.33 ರಷ್ಟು ಬೆಳೆ ಹಾನಿ ಕಂಡುಬಂದಿಲ್ಲ ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕ ಶಿವಕುಮಾರ್ ತಿಳಿಸಿದರು.
ಮಳೆ ಹೆಚ್ಚಾದಲ್ಲಿ ಕಾಫಿ ಬೆಳೆ ಉದುರುವ (ಡ್ರಾಪಿಂಗ್) ಸಾಧ್ಯತೆ ಇರುತ್ತದೆ. ಈ ಕುರಿತು ಹೆಚ್ಚು ಗಮನ ಹರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ್ ಅವರು ಹೇಳಿದರು.
ಸಭೆಯಲ್ಲಿ ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಮತ್ತಿತರರು ಹಾಜರಿದ್ದರು.