ಹೊಸದಿಗಂತ ವರದಿ ಮಡಿಕೇರಿ:
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಆಶ್ರಯದಲ್ಲಿ ಸಾಂಸ್ಕೃತಿಕ ಉತ್ಸವವನ್ನು ನಡೆಸುವಂತೆ ಬಳಗದ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನ ಒಂದು ಲಕ್ಷ ರೂ.ಗಳನ್ನು ನೀಡಿದ್ದು ಅದಕ್ಕಾಗಿ ಪ್ರಾಧಿಕಾರಕ್ಕೆ ಬಳಗವು ಕೃತಜ್ಞತೆ ಸಲ್ಲಿಸಿತು.
‘ಭಾರತ ಸ್ವಾತಂತ್ರ್ಯ ಅಮೃತೋತ್ಸವದ ಸವಿನೆನಪು’ ಮತ್ತು ರಾಷ್ಟ್ರೀಯ ಭಾವೈಕ್ಯತೆಯ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ನಾಡು ನುಡಿಯ ಮತ್ತು ಗಡಿ ಪ್ರದೇಶದ ಸಮಸ್ಯೆಗಳ ಕುರಿತು ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಮತ್ತು ಕನ್ನಡ ಶಾಲೆಗಳ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ, ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್, ಉಪಾಧ್ಯಕ್ಷೆ ರೇವತಿ ರಮೇಶ್ ಸಲಹೆಗಾರರಾದ ಟಿ.ಪಿ.ರಮೇಶ್, ಕೆ.ಟಿ ಬೇಬಿ ಮ್ಯಾಥ್ಯೂ, ನವೀನ್ ಅಂಬೆಕಲ್, ಎಂ ಎಂ. ಲಿಯಾಕತ್ ಆಲಿ, ಎಸ್ ಐ ಮುನೀರ್ ಅಹಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಅಧಿಕಾರಿ ಮಣಜೂರು ಮಂಜುನಾಥ್ ಭಾಗವಹಿಸಿ ಚರ್ಚಿಸಿದರು. ಸ್ಥಳೀಯ ಸಾಂಸ್ಕೃತಿಕ ಸಂಸ್ಥೆಗಳ ಸಹಕಾರದೊಂದಿಗೆ ಕನ್ನಡ ಗೀತ ಗಾಯನ ಮತ್ತು ಜಾನಪದ ನೃತ್ಯ ಅಯೋಜಿಸುವ ಬಗ್ಗೆ ಚರ್ಚೆ ನಡೆಯಿತು.