ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೂರ್ವ ಕರಾವಳಿ ರಾಜ್ಯಗಳಿಗೆ ಅಸನಿ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. 2022 ರಲ್ಲಿ ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳುವ ಮೊದಲ ಚಂಡಮಾರುತ ಇದಾಗಿದೆ. ಪ್ರಸ್ತುತ ಅಂಡಮಾನ್ ಸಮುದ್ರದಿಂದ ಬಂಗಾಳ ಕೊಲ್ಲಿಗೆ (ಉತ್ತರಕ್ಕೆ) ಚಲಿಸುತ್ತಿರುವ ಅಸನಿ ಚಂಡಮಾರುತ ಆಂಧ್ರ-ಒಡಿಶಾ ಅಥವಾ ಒಡಿಶಾ-ಪಶ್ಚಿಮ ಬಂಗಾಳದ ಕರಾವಳಿ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಶನಿವಾರ ಸ್ಪಷ್ಟಪಡಿಸಿದ್ದಾರೆ. ಮೇ 10 ರಂದು ಚಂಡಮಾರುತವು ಕರಾವಳಿ ತೀರಗಳಿಗೆ ಅಪ್ಪಳಿಸಲಿದೆ ಎಂದಿದ್ದಾರೆ. ಗಂಟೆಗೆ 90 ಕಿಮೀ ವೇಗದಲ್ಲಿ ಗಾಳಿ ಬೀಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಮೇ 8ರಿಂದ ಬಂಗಾಳ ಮತ್ತು ಒಡಿಶಾದ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಂಡಮಾನ್ ಸೇರಿದಂತೆ ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಆಂಧ್ರಪ್ರದೇಶ, ಜಾರ್ಖಂಡ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ.
Well Marked Low Pressure area over South-East Bay of Bengal adjoining South Andaman Sea area. pic.twitter.com/ErRyx8UBpI
— Meteorological Centre, Bhubaneswar (@mcbbsr) May 7, 2022
ಚಂಡಮಾರುತದ ಪ್ರಭಾವ ಹೆಚ್ಚಾಗಿರುವ ಒಡಿಶಾ ರಾಜ್ಯಕ್ಕೆ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಎನ್ಡಿಆರ್ಎಫ್ ಮತ್ತು ಒಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಒಡಿಶಾ ವಿಶೇಷ ಪರಿಹಾರ ಆಯುಕ್ತ ಪಿಕೆ ಜೆನಾ ತಿಳಿಸಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್ ಸೂಚನೆಯಂತೆ ಮೀನುಗಾರರು ಬೇಟೆಗೆ ಹೋಗಬಾರದು ಹಾಗೂ ಈಗಾಗಲೇ ಬೇಟೆಗೆ ತೆರಳಿರುವವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಆದೇಶಿಸಿದ್ದಾರೆ. ಬರಲಿರುವ ಅಪಾಯ ಎದುರಿಸಲು ತಾವು ಸಂಪೂರ್ಣ ಸಿದ್ಧರಾಗಿದ್ದೇವೆ ಎಂದು ಪಿಕೆ ಜೆನಾ ಬಹಿರಂಗಪಡಿಸಿದ್ದಾರೆ.