ಹೊಸದಿಗಂತ ವರದಿ ಚಿಕ್ಕಮಗಳೂರು :
ಪ್ರೇಯಸಿಯನ್ನು ಕೊಂದು ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದಾಸರಳ್ಳಿ ಬಳಿ ನಡೆದಿದೆ.
ಕಾರಿನಲ್ಲಿ ಯುವತಿಯ ಶವ ಕಂಡುಬಂದಿದೆ. ಸ್ವಲ್ಪ ದೂರದ ಮರದಲ್ಲಿ ಯುವಕನ ಶವ ನೇತಾಡುತ್ತಿರುವುದು ಪತ್ತೆಯಾಗಿದೆ.
ಬೆಂಗಳೂರಿನ ಇಬ್ಬರ ಮೃತದೇಹ ಚಿಕ್ಕಮಗಳೂರು ಬಳಿ ಪತ್ತೆಯಾಗಿದ್ದು, ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಮೂಡಿತ್ತು. ಇದೀಗ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.
ಯುವಕ ಮಧು, ಯುವತಿ ಪೂರ್ಣಿಮಾ ರಾಮನಗರ ಮೂಲದವರು ಎಂದು ತಿಳಿದುಬಂದಿದೆ. ಇಬ್ಬರೂ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬುಧವಾರ ಇವರಿಬ್ಬರೂ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದು, ಯುವತಿಯನ್ನು ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರು KA 03 AD4628 ನೋಂದಣಿಯ ಬಾಡಿಗೆ ಕಾರಿನಲ್ಲಿ ಈ ಪ್ರೇಮಿಗಳು ಬಂದಿದ್ದಾರೆ.
ಯುವತಿಯ ಕತ್ತು ಹಿಸುಕಿರುವ ಗುರುತು ಕಂಡು ಬಂದಿದೆ. ವೇಲ್ ನಿಂದ ಪಕ್ಕದ ಮರದಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.